ಕರ್ನಾಟಕ ಪ್ರವಾಹ : ಶಾಲೆ - ಕಾಲೇಜುಗಳ ರಜೆ ಕಡಿತ ?
ಪ್ರವಾಹ ಸಂದರ್ಭದಲ್ಲಿ ಹಲವು ದಿನಗಳ ಕಾಲ ಶಾಲೆಗಳು ಮುಚ್ಚಿದ್ದ ಕಾರಣಕ್ಕೆ ಮುಂದಿನ ದಿನಗಳಲ್ಲಿ ರಜೆ ದಿನವೂ ಶಾಲೆ ನಡೆಸಲು ತೀರ್ಮಾನಿಸಲಾಗಿದೆ.
ಮಂಗಳೂರು [ಆ.18]: ಮಹಾಮಳೆಗೆ ಕಳೆದ ವಾರ ಶಾಲಾ- ಕಾಲೇಜುಗಳಿಗೆ ನೀಡಿದ್ದ ರಜೆಯನ್ನು ಮುಂದಿನ ರಜಾ ದಿನಗಳಲ್ಲಿ ತರಗತಿ ನಡೆಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಇದನ್ನು ರಾಜ್ಯಾದ್ಯಂತ ಏಕರೂಪದಲ್ಲಿ ಜಾರಿಗೆ ತರಲು ಉದ್ದೇಶಿಸಿದೆ. ಈ ಕುರಿತು ಶನಿವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದ್ದು, ಮಳೆಯ ಅಬ್ಬರ ಮುಗಿದ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ರಜೆಯನ್ನು ಸರಿದೂಗಿಸಲು ಮುಂದಿನ ದಿನಗಳಲ್ಲಿ ಶನಿವಾರ ಪೂರ್ಣ ದಿನ ಮತ್ತು ಭಾನುವಾರವೂ ತರಗತಿ ನಡೆಸಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದಸರಾ ರಜೆ ಕಡಿತ ಇಲ್ಲ?: ಈ ಬಾರಿ ದಸರಾ ಅವಧಿಯ ಮಧ್ಯಂತರ ರಜೆಯನ್ನು ಮಳೆಗಾಲ ರಜೆಗೆ ಹೊಂದಾಣಿಕೆ ಮಾಡುವ ಸಾಧ್ಯತೆ ಇಲ್ಲ. ಯಾಕೆಂದರೆ, ದಸರಾ ಸಂಭ್ರಮದಿಂದ ವಂಚಿತಗೊಳಿಸಬಾರದು ಎಂಬ ಕಾರಣಕ್ಕೆ ದಸರೆ ರಜೆಯನ್ನು ಮೊಟಕುಗೊಳಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಅದೇ ರೀತಿ ಅಲ್ಪಸಂಖ್ಯಾತ ಶಾಲೆಗಳು ಡಿಸೆಂಬರ್ನಲ್ಲಿ ಕ್ರಿಸ್ಮಸ್ಗೆ ಒಂದು ವಾರ ಕಾಲ ರಜೆ ನೀಡುತ್ತಾರೆ. ಈ ರಜೆಗೂ ತೊಡಕಾಗದಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಹೇಳಲಾಗಿದೆ.