ನಾಲ್ಕು ವರ್ಷದ ಹಿಂದೆ  ದೆಹಲಿಯ ಲೀಲಾ ಹೋಟೆಲ್‌ನ ಕೊಠಡಿಯಲ್ಲಿ ಸಂಭವಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್  ಸಾವು ಆತ್ಮಹತ್ಯೆಯಲ್ಲ ಕೊಲೆ  ಎಂಬ ಮಾಹಿತಿ ಹೊರಬಿದ್ದಿದೆ.

ನವದೆಹಲಿ (ಮಾ. 13):  ನಾಲ್ಕು ವರ್ಷದ ಹಿಂದೆ  ದೆಹಲಿಯ ಲೀಲಾ ಹೋಟೆಲ್‌ನ ಕೊಠಡಿಯಲ್ಲಿ ಸಂಭವಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್  ಸಾವು ಆತ್ಮಹತ್ಯೆಯಲ್ಲ ಕೊಲೆ
ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ತನಗೆ ಪೊಲೀಸ್ ಇಲಾಖೆಯಲ್ಲಿರುವ ರಹಸ್ಯ ವರದಿ ಲಭ್ಯವಾಗಿದ್ದು,  ಅದರಲ್ಲಿ ಸುನಂದಾರದ್ದು ಕೊಲೆ  ಎಂಬುದು ಆರಂಭದಿಂದಲೂ  ತನಿಖಾಧಿಕಾರಿಗಳಿಗೆ ತಿಳಿದಿದೆ. ಆಕೆಯನ್ನು ಕೊಂದವರು ಯಾರೆಂಬುದೂ ಅವರಿಗೆ ಗೊತ್ತಿದೆ. ಆದರೂ ಪ್ರಕರಣ ನಿಗೂಢವಾಗಿಯೇ  ಉಳಿದಿದೆ ಎಂದು ಹೇಳಲಾಗಿದೆ ಎಂದು  ಡಿಎನ್‌ಎ ಪತ್ರಿಕೆ ವರದಿ ಮಾಡಿದೆ.

ರಹಸ್ಯ ವರದಿಯಲ್ಲಿ ಏನಿದೆ: ಸುನಂದಾ  ಸಾವಿನ ನಂತರ ದೆಹಲಿಯ ಆಗಿನ ಡಿಸಿಪಿ  ಬಿ.ಎಸ್.ಜೈಸ್ವಾಲ್ ಪ್ರಾಥಮಿಕ ವರದಿ  ಸಿದ್ಧಪಡಿಸಿದ್ದರು. ಅದರಲ್ಲಿ, ‘ವಸಂತ  ವಿಹಾರದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್  ಅಲೋಕ್ ಶರ್ಮಾ ಸಮ್ಮುಖದಲ್ಲಿ ಪಂಚನಾಮೆ ನಡೆಸಲಾಗಿದ್ದು, ಶರ್ಮಾ  ಅವರು ಇದು ಆತ್ಮಹತ್ಯೆಯಲ್ಲ  ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಂತರ ಮರಣೋತ್ತರ   ಪರೀಕ್ಷೆಯ ವರದಿಯಲ್ಲಿ ವಿಷವೇ  ಸಾವಿಗೆ ಕಾರಣ ಎಂದು  ಹೇಳಲಾಯಿತು. ಸುನಂದಾ ಮೈ ಮೇಲೆ 15 ಗಾಯಗಳಿದ್ದವು. ಅವು ಇಬ್ಬರು  ವ್ಯಕ್ತಿಗಳು ಹೊಡೆದಾಡಿಕೊಂಡಿದ್ದರಿಂದ ಆದ ಗಾಯಗಳು. 10 ನೇ ಗಾಯ ಮಾತ್ರ  ಇಂಜೆಕ್ಷನ್‌ನಿಂದಾಗಿತ್ತು ಮತ್ತು 12 ನೇ ಗಾಯ  ಹಲ್ಲಿನಿಂದ ಕಚ್ಚಿದ್ದಾಗಿತ್ತು. ಈ ಎಲ್ಲ  ಸಾಂದರ್ಭಿಕ ಸಾಕ್ಷ್ಯಗಳು ಇದೊಂದು ಕೊಲೆ  ಎಂದು ಹೇಳುತ್ತಿದ್ದವು. ಹೀಗಾಗಿ ಸಬ್  ಡಿವಿಷನಲ್ ಮ್ಯಾಜಿಸ್ಟ್ರೇಟ್ ಅವರು  ಪೊಲೀಸರಿಗೆ ಕೊಲೆ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದರು.

ಸುನಂದಾ ದೇಹದ ಮೇಲಿದ್ದ ಗಾಯಗಳು ಆಕೆ ಮತ್ತು ಪತಿ ಶಶಿ ತರೂರ್ ಮಧ್ಯೆ ನಡೆದ ಹೊಡೆದಾಟದಿಂದ  ಆಗಿರಬಹುದು ಎಂದು ಅವರ ಪರಿಚಾರಕ ನರೇನ್ ಸಿಂಗ್ ಹೇಳಿದ್ದಾನೆ’ ಎಂದು  ತಿಳಿಸಲಾಗಿದೆ. ಈ ವರದಿಯನ್ನು ಅಂದಿನ
ದಕ್ಷಿಣ ದೆಹಲಿ ಜಂಟಿ ಪೊಲೀಸ್ ಆಯುಕ್ತ ವಿವೇಕ್ ಗೋಗಿಯಾ ಅವರಿಗೆ ಸಲ್ಲಿಸಲಾಗಿದೆ.  ನಂತರ ಅದು ಕೇಂದ್ರ ಗೃಹ ಸಚಿವಾಲಯಕ್ಕೂ  ಸಲ್ಲಿಕೆಯಾಗಿದೆ.‘ಸಾವಿಗೆ ಕಾರಣ ಪತ್ತೆಯಾದ  ನಂತರವೂ ಪೊಲೀಸರು ಕೇಸು ದಾಖಲಿಸಲಿಲ್ಲ. ಅಂದಿನ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ  ಅವರ ನಿರ್ಧಾರದಿಂದಾಗಿ ಎಫ್‌ಐಆರ್ ದಾಖಲಿಸುವುದು 1 ವರ್ಷ ವಿಳಂಬವಾಯಿತು  ಮತ್ತು ತನಿಖೆ 2 ವರ್ಷ ವಿಳಂಬವಾಯಿತು’ ಎಂದು ವರದಿಯಲ್ಲಿ ತಿಳಿಸಲಾಗಿದೆ.