10 ನಿಮಿಷದಲ್ಲಿ ಮನೆಗೆ ಬರುತ್ತೇನೆ, ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಲಿಯಾದ ಅವಳಿ ಸಹೋದರನ ಕೊನೆಯ ಕರೆ, ಅಷ್ಟಕ್ಕೂ ಈ ದುರಂತ ನಡೆದಿದ್ದು ಹೇಗೆ, ಇತ್ತೀಚೆಗೆ ಟೆಕ್ಕಿ ದುರಂತ ಸಾವಿನ ಬಳಿಕ ಮತ್ತೊಂದು ಘಟನೆ ನಡೆದಿದೆ.
ದೆಹಲಿ (ಫೆ.06) ಜಲಮಂಡಳಿ ನಿರ್ಲಕ್ಷ್ಯಕ್ಕೆ ಖಾಸಗಿ ಬ್ಯಾಂಕ್ ಮ್ಯಾನೇಜರ್ ದುರಂತ ಅಂತ್ಯ ಕಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಇತ್ತೀಚೆಗ ನೋಯ್ಡಾದಲ್ಲಿ ಟೆಕ್ಕಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೆಸರು ತುಂಬಿದ ಹೊಂಡದಲ್ಲಿ ಮುಳುಗಿ ಸತ್ತ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲಿ ದುರಂತ ನಡೆದಿದೆ. ಬೈಕ್ನಲ್ಲಿ ಮನೆಗೆ ಬರುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಕಮಲ್ ಜೈನ್ ಜಲಮಂಡಳಿಯ ಕಾಮಗಾರಿಯ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಮತ್ತೆ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ದೇಶವೇ ಪ್ರತಿಭಟನೆ ಮಾಡುವ ಪರಿಸ್ಥಿತಿಗೆ ದೂಡಿದೆ.
ದೆಹಲಿ ಜಲಮಂಡಳಿ ಕಾಮಗಾರಿ ಪ್ರಯುಕ್ತ ರಸ್ತೆ ಪಕ್ಕದಲ್ಲಿ ಅಗೆತ ಕಾರ್ಯ ಶುರು ಮಾಡಿದೆ. ರಸ್ತೆ ಪಕ್ಕದಲ್ಲಿ ಗುಂಡಿ ಅಗೆದು ಹಾಗೇ ನಿರ್ಲಕ್ಷ್ಯ ವಹಿಸಿದೆ. ತಡ ರಾತ್ರಿ ಬೈಕ್ ಮೂಲಕ ಮನೆಗೆ ಮರಳುತ್ತಿದ್ದ ಕಮಲ್ ಜೈನ್ ಈ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕಮಲ್ ಜೈನ್ ಮೃತದೇಹ ಪಕ್ಕದಲ್ಲೇ ಅಪಾಚೆ ಬೈಕ್ ಕೂಡ ಬಿದ್ದಿತ್ತು.
ಅವಳಿ ಸಹೋದರನಿಗೆ ಕರೆ ಮಾಡಿದ್ದ ಕಮಲ್ ಜೈನ್
ಕಮಲ್ ಜೈನ್ ಮನೆಗೆ ಬರಲು ತಡವಾಗುತ್ತೆ ಎಂದು ತೆರಳಿ ಮನೆಯಿಂದ ಹೊರಟಿದ್ದ. ಬಳಿಕ ಕೆಲಸ ಕಾರ್ಯಗಳನ್ನು ಮುಗಿಸಿದ ಕಮಲ್ ಜೈನ್ ಅವಳಿ ಸಹೋದರ ಕರಣ್ ಜೈನ್ಗೆ ಕರೆ ಮಾಡಿ 10 ನಿಮಿಷದಲ್ಲಿ ಮನೆ ತಲುಪುವುದಾಗಿ ಹೇಳಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಕಮಲ್ ಜೈನ್ ಮನೆಗೆ ಬರಲೇ ಇಲ್ಲ. ಹೀಗಾಗಿ ಅನುಮಾನಗೊಂಡ ಕುಟುಂಬ ಸದಸ್ಯರು ಕಮಲ್ ಜೈನ್ಗೆ ಕರೆ ಮಾಡಿದ್ದಾರೆ. ಕಮಲ್ ಜೈನ್ ಫೋನ್ ರಿಂಗ್ ಆದರೂ ರಿಸೀವ್ ಮಾಡಲಿಲ್ಲ. ಹೀಗಾಗಿ ಸತತವಾಗಿ ಫೋನ್ ಕರೆ ಮಾಡಿದ್ದಾರೆ. ಆದರೆ ಫೋನ್ ರಿಸೀವ್ ಮಾಡಲಿಲ್ಲ. ಕೆಲ ಹೊತ್ತಿನ ಬಳಿಕ ಕಮಲ್ ಜೈನ್ ಫೋನ್ ಸ್ವಿಚ್ ಆಫ್ ಆಗಿದೆ.
ಪೊಲೀಸರ ನಿರ್ಲಕ್ಷ್ಯ
ಕಮಲ್ ಜೈನ್ ಮನೆಗೆ ಬರದೆ ಆತಂಕಗೊಂಡ ಕಮಲ್ ಜೈನ್ ಪೋಷಕರು, ಅವಳಿ ಸಹೋದರ ತಕ್ಷಣವೇ ಪೊಲೀಸರ ಸಂಪರ್ಕಿಸಿ ನೆರವು ಕೇಳಿದ್ದಾರೆ. ಪೊಲೀಸರು ಟವರ್ ಲೋಕೇಶನ್ ಪತ್ತೆ ಹಚ್ಚಲು ಹಿಂದೇಟು ಹಾಕಿದ್ದಾರೆ. ಇತ್ತ ಕಮಲ್ ಜೈನ್ ಗೆಳೆಯರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಪ್ರಯತ್ನಿಸಿದರೆ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಮನೆಗೆ ಬರುತ್ತಾನೆ ಎಂದು ಸಬೂಬು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಲೋಕೇಶನ್ ಮಾಹಿತಿ ಸೆಂಡ್ ಮಾಡಿ ತಕ್ಷಣವೇ ಡಿಲೀಟ್ ಮಾಡಿದ್ದಾರೆ. ಬಳಿಕ ಫೋನ್ ಲೋಕೇಶನ್ ಮನೆಯಿಂದ 200 ಮೀಟರ್ ದೂರದಲ್ಲಿದೆ ಎಂದು ತಿಳಿಸಿದ್ದಾರೆ. ಇಷ್ಟಾದರೂ ಪೊಲೀಸರು ಹುಡುಕುವ ಪ್ರಯತ್ನ ಮಾಡಲಿಲ್ಲ. ಕುಟುಂಬಸ್ಥರು ತೀವ್ರ ಹುಡುಕಾಟದ ಬಳಿಕ ಕಮಲ್ ಜೈನ್ ಮೃತದೇಹ ಜಲಮಂಡಳಿ ಅಗೆದು ಬಿಟ್ಟು ಹೋದ ಗುಂಡಿಯಲ್ಲಿ ಬಿದ್ದಿತ್ತು. ಕಮಲ್ ಜೈನ್ ಮೃತದೇಹ ಹೆಲ್ಮೆಟ್, ಜಾಕೆಟ್, ಗ್ಲೌಸ್ ಧರಿಸಿದ ಸ್ಥಿತಿಯಲ್ಲಿತ್ತು.


