ಪ್ರತ್ಯೇಕ ರಾಜ್ಯ: ಉಲ್ಟಾ ಹೊಡೆದ ಶ್ರೀರಾಮಲು, ಕಾರಣವೇನು?
ಶಾಸಕ ಬಿ.ಶ್ರೀರಾಮಲು ಯು ಟರ್ನ್ ತೆಗೆದುಕೊಂಡಿದ್ದಾರೆ. ಬೆಳಗ್ಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ನನ್ನ ಬೆಂಬಲ ಎಂದಿದ್ದವರರೂ ಸಂಜೆ ವೇಳೆಗೆ ನಾನು ಅಖಂಡ ಕರ್ನಾಟಕ ಗೌರವಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು[ಜು.27] ಉತ್ತರ ಕರ್ನಾಟಕದ ರೈತರಿಗೆ ಹಾಗೂ ಈ ಭಾಗದ ಜನತೆಗೆ ಅನ್ಯಾಯವಾದರೆ ನಾನು ಸುಮ್ಮನಿರುವುದಿಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದ ಶ್ರೀರಾಮಲು ಸಂಜೆ ವೇಳೆಗೆ ವರಸೆ ಬದಲಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಮಲು, ರಾಜ್ಯ ಸರಕಾರದಿಂದ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯವಾಗುತ್ತಿದೆ. ಅವರನ್ನು ನಿರ್ಲಕ್ಷಿಸುತ್ತಿದ್ದು, ನನ್ನ ಜನತೆಗೆ ಅನ್ಯಾಯವಾದಲ್ಲಿ ನಾನು ಸುಮ್ಮನಿರುವುದಿಲ್ಲ, ನಾನು ರಾಜೀನಾಮೆ ನೀಡಲು ಸಿದ್ಧ. ರಾಜ್ಯ ಸರಕಾರ ನಿರ್ಲಕ್ಷ್ಯ ಭಾವನೆ ತೋರುತ್ತಿರುವುದರಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ದನಿಯಾಗುತ್ತೇನೆ, ಹಾಗೂ ನನ್ನ ಮುಂದಾಳತ್ವದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದಿದ್ದರು.
ಆದರೆ ಸಂಜೆ ವೇಳೆಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪ್ರತ್ಯೇಕ ರಾಜ್ಯ ಹೋರಾಟ ಹುಟ್ಟಿಕೊಂಡಿರುವುದು ದುರ್ದೈವ. ನಾನು ಅಖಂಡ ಕರ್ನಾಟಕದ ಪರವಾಗಿದ್ದು ರಾಜ್ಯದ ಸಮಗ್ರ ದೃಷ್ಟಿಕೋನ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ಪ್ರತ್ಯೇಕ ರಾಜ್ಯ ಬೇಡಿಕೆಗೆ ನನ್ನ ಬೆಂಬಲವಿಲ್ಲ:ಇನ್ನೊಂದೆಡೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ ಎಂದಿದ್ದಾರೆ. ಆದರೆ ಈ ಭಾಗಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಶೀಘ್ರದಲ್ಲಿ ಉತ್ತರ ಕರ್ನಾಟಕ ಜನಪ್ರತಿನಿಧಿಗಳ ನಿಯೋಗ ಸಿಎಂ ಭೇಟಿಗೆ ಬೆಂಗಳೂರಿಗೆ ತೆರಳಲಿದೆ ಎಂದು ತಿಳಿಸಿದ್ದಾರೆ.