ಮನೆ ಖರೀದಿಯಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ, ಅನ್ಯಾಯ ತಪ್ಪಿಸಲು ಜಾರಿಗೆ ತರಲು ಉದ್ದೇಶಿಸಿರುವ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ಆರ್‌ಇಆರ್‌ಎ)ಯ ನಿಯಮಗಳನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
ನವದೆಹಲಿ/ಬೆಂಗಳೂರು (ನ.02): ನೀವು ಅಪಾರ್ಟ್ಮೆಂಟ್ ಅಥವಾ ಮನೆ ಖರೀದಿಗಾಗಿ ಮುಂಗಡ ಹಣ ಪಾವತಿ ಮಾಡಿದ್ದೀರಾ? ಒಂದು ವೇಳೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳದಿದ್ದರೆ, ಹಣ ಪುನಃ ನಿಮಗೆ ಸಿಗುತ್ತದೆ. ಅದೂ ಶೇ.10.9ರ ಬಡ್ಡಿ ದರದಲ್ಲಿ!
ಹೌದು, ಇಷ್ಟೇ ಅಲ್ಲ, ಇನ್ನೂ ಇದೆ. ಮನೆ ಖರೀದಿಸಬೇಕೆಂದು ಬಯಸಿದ ನೀವು ಬಿಲ್ಡರ್ಸ್ಗೆ ದುಡ್ಡು ಕೊಟ್ಟು, ಒಂದು ವೇಳೆ ಯಾವುದೋ ಕಾರಣಕ್ಕೆ ಮನಸ್ಸು ಬದಲಾಯಿಸಿ ಹಣ ಹಿಂದಕ್ಕೆ ಪಡೆಯಬೇಕೆಂದು ತೀರ್ಮಾನಿಸಿದಿರಿ ಎಂದಿಟ್ಟುಕೊಳ್ಳಿ. ಡೆವೆಲೆಪರ್ ಕಂಪನಿಗಳು 45 ದಿನಗಳ ಒಳಗಾಗಿ ಶೇ.2ರಷ್ಟುಬಡ್ಡಿ ಸೇರಿಸಿ ಹಣ ಹಿಂದಿರುಗಿಸಬೇಕು.
ಇದರ ಜತೆಗೆ, ರಾಜ್ಯ ಸರ್ಕಾರಗಳೂ ಕೂಡ ತಮ್ಮ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಾಧಿಕಾರ ರಚಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಉತ್ತರ ಪ್ರದೇಶ ಸರ್ಕಾರ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳ ಜತೆಗೆ ಮಾತುಕತೆ ನಡೆಸಿದ್ದರೆ, ಮಹಾರಾಷ್ಟ್ರ ಸರ್ಕಾರ ಕರಡು ನಿಯಮಗಳನ್ನು ಬಿಡುಗಡೆ ಮಾಡಿ, ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದೆ.
ಮನೆ ಖರೀದಿಯಲ್ಲಿ ಗ್ರಾಹಕರಿಗೆ ಉಂಟಾಗುವ ಮೋಸ, ಅನ್ಯಾಯ ತಪ್ಪಿಸಲು ಜಾರಿಗೆ ತರಲು ಉದ್ದೇಶಿಸಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ಆರ್ಇಆರ್ಎ)ಯ ನಿಯಮಗಳನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಈ ಬಗ್ಗೆ ‘ದ ಇಕನಾಮಿಕ್ ಟೈಮ್ಸ್' ವರದಿ ಮಾಡಿದೆ. ಇಷ್ಟುಮಾತ್ರವಲ್ಲದೆ ಆಯಾ ರಾಜ್ಯಗಳ ಮಟ್ಟದಲ್ಲಿ ರಚನೆಯಾಗಲಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿಲ್ಡರ್ಗಳು ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು.
ಹಣ ಹಿಂದಕ್ಕೆ ನೀಡುವುದರ ಜತೆಗೆ ಸದ್ಯ ಕಾಮಗಾರಿ ನಡೆಯುತ್ತಿರುವ ಯೋಜನೆಗಳಿಗಾಗಿ ಗ್ರಾಹಕರಿಂದ ಸಂಗ್ರಹಿಸಿದ ಹಣದ ಶೇ.70ನ್ನು ಠೇವಣಿಯಾಗಿ ಇರಿಸಬೇಕೆಂದು ಅಂತಿಮ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಆ ಮೊತ್ತವನ್ನು ಉಪಯೋಗಿಸದೇ ಇದ್ದರೆ ಮನೆ ಅಥವಾ ಅಪಾರ್ಟ್ಮೆಂಟ್ನ ರಿಜಿಸ್ಪ್ರೇಷನ್ ಮಾಡುವ ಮೂರು ತಿಂಗಳು ಮೊದಲು ಪ್ರತ್ಯೇಕ ಖಾತೆಗೆ ವರ್ಗಾಯಿಸಬೇಕು. ಕಾಯ್ದೆಯ ಮೂಲ ಪ್ರಸ್ತಾಪದಲ್ಲಿ ಈ ಅಂಶ ಸೇರ್ಪಡೆಯಾಗಿರಲಿಲ್ಲ. ಕಾಯ್ದೆಯ ನಿಯಮಗಳನ್ನು ಪ್ರಕಟಿಸುವ ವೇಳೆಯಲ್ಲಿ ಗ್ರಾಹಕರ ಹಿತ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಹಾಲಿ ಕಾಮಗಾರಿ ಪೂರ್ಣಗೊಳಿಸದೆ ಪಡೆದುಕೊಂಡ ಮೊತ್ತವನ್ನು ಮತ್ತೊಂದು ಯೋಜನೆಗಾಗಿ ಬಿಲ್ಡರ್ ವರ್ಗಾಯಿಸದಂತೆ ಮಾಡಲು ನಿಯಮ ಸೇರ್ಪಡೆಗೊಳಿಸಲಾಗಿದೆ.
ಸಲಹೆ ಕೇಳಿದ ಕರ್ನಾಟಕ ಸರ್ಕಾರ
ಸರ್ಕಾರ ಕೂಡ ರಾಜ್ಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರಚಿಸಲು ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಡೆವಲಪರ್ಗಳಿಂದ ಅಭಿಪ್ರಾಯ ಆಹ್ವಾನಿಸಿದೆ. ನ.10ರ ಒಳಗಾಗಿ ಸಲಹೆಗಳು, ಆಕ್ಷೇಪಗಳು ಇದ್ದಲ್ಲಿ ಸಲ್ಲಿಸಲು ಅವಕಾಶ ಉಂಟು. ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ನಿಯಮಗಳನ್ನೇ ರಾಜ್ಯ ಸರ್ಕಾರ ಉಳಿಸಿಕೊಂಡಿದೆ.
