ಅಣ್ಣಾಮಲೈಗೆ 10 ಸಾವಿರ ಮೀರಿದ ಕರೆಗಳು, ಸಾವಿರಾರು ಸಂದೇಶ
ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ತಮ್ಮ ಹುದ್ದೆ ರಾಜೀನಾಮೆ ನೀಡಿದ್ದು, ಅಭಿಮಾನಿಗಳಿಂದ ಸಾವಿರಾರು ಕರೆಗಳು ಬರುತ್ತಿದ್ದು, ಅವರ ಭೇಟಿಗೆ ಆಗ್ರಹಿಸುತ್ತಿದ್ದಾರೆ.
ಬೆಂಗಳೂರು : ಕರ್ನಾಟಕದ ‘ಸಿಂಗಂ’ ಎಂದೇ ಹೆಸರು ಮಾಡಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅಣ್ಣಾಮಲೈ ಕುಪ್ಪೆಸ್ವಾಮಿ ಅವರ ರಾಜೀನಾಮೆಯಿಂದ ಅವರ ಅಭಿಮಾನಿ ಬಳಗಕ್ಕೆ ಹೆಚ್ಚು ಸಂಕಟವಾಗಿದ್ದು, ಈ ನಿಟ್ಟಿನಲ್ಲಿ ವರ ಅಭಿಮಾನಿಗಳಿಂದ ಸಾವಿರಾರು ಕರೆಗಳು ಬರುತ್ತಿವೆ.
ಮಂಗಳವಾರ ಹುದ್ದೆ ತೊರೆದಿದ್ದು, ಅವರು ಕಾರ್ಯನಿರ್ವಹಿಸಿದ ಬೆಂಗಳೂರು , ಚಿಕ್ಕಮಂಗಳೂರು ಕಾರ್ಕಳ, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಕರೆಗಳು ಬರುತ್ತಿವೆ.
ಅಷ್ಟು ಮಾತ್ರವಲ್ಲದೇ ದಕ್ಷಿಣ ವಿಭಾಗದ ಡಿಸಿಪಿ ಕಚೇರಿಗೆ ಕರೆ ಮಾಡಿ ಸಾಹೇಬರು ಇದ್ದಾರ ಎಂದು ಅಭಿಮಾನಿಗಳು ವಿಚಾರಿಸುತ್ತಿದ್ದು, ಭೇಟಿಗೆ ಆಗ್ರಹಿಸುತ್ತಿದ್ದಾರೆ.
ಅಲ್ಲದೇ ಅವರ ಬಳಿ ಮಾತುಕತೆ ನಡೆಸಬೇಕು ಎಂದು ಕೇಳುತ್ತಿದ್ದು, ರಾಜೀನಾಮೆ ನೀಡಿದ ದಿನವೇ 10 ಸಾವಿರ ಪೋನು ಕರೆ, 2 ಸಾವಿರ ಸಂದೇಶಗಳು ಬಂದಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ನಲ್ಲಿ ಅಣ್ಣಾ ಮಲೈ ಪೋಟೊ ಹಾಕಿ ಮಿಸ್ ಯು ಎಂದು ಸ್ಟೇಟಸ್ ಹಾಕಿದ್ದಾರೆ.