ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಯೋಜನೆಯಲ್ಲಿ ಭ್ರಷ್ಟತೆ ನಡೆದಿರುವ ಬಗ್ಗೆ ಈ ಹಿಂದೆ ಮಾಡಿದ ಪ್ರಸ್ತಾಪವು ಸರ್ಕಾರದ ನಡೆಯಿಂದಾಗಿ ದೃಢಪಟ್ಟಿದೆ. ಯೋಜನೆ ವಿರುದ್ಧ ನಡೆದ ಹೋರಾಟವು ಬೆಂಗಳೂರು ಜನರಿಗೆ ಸಿಕ್ಕ ಗೆಲುವಾಗಿದೆ. ಮಾತ್ರವಲ್ಲ, ಕಾನೂನು ಹೋರಾಟದಲ್ಲಿಯೂ ಜಯ ಸಿಕ್ಕಿದೆ.
ಬೆಂಗಳೂರು(ಮಾ.02): ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವುದು ಬೆಂಗಳೂರು ನಗರದ ಜನತೆಗೆ ಸಿಕ್ಕ ಗೆಲುವಾಗಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ಯೋಜನೆಯಲ್ಲಿ ಭ್ರಷ್ಟತೆ ನಡೆದಿರುವ ಬಗ್ಗೆ ಈ ಹಿಂದೆ ಮಾಡಿದ ಪ್ರಸ್ತಾಪವು ಸರ್ಕಾರದ ನಡೆಯಿಂದಾಗಿ ದೃಢಪಟ್ಟಿದೆ. ಯೋಜನೆ ವಿರುದ್ಧ ನಡೆದ ಹೋರಾಟವು ಬೆಂಗಳೂರು ಜನರಿಗೆ ಸಿಕ್ಕ ಗೆಲುವಾಗಿದೆ. ಮಾತ್ರವಲ್ಲ, ಕಾನೂನು ಹೋರಾಟದಲ್ಲಿಯೂ ಜಯ ಸಿಕ್ಕಿದೆ.
ವಿಚಾರಣೆ ನಡೆಸುತ್ತಿದ್ದ ರಾಷ್ಟ್ರೀಯ ಹಸಿರು ಪೀಠ ಮತ್ತು ಹೈಕೋರ್ಟ್ನ ನಡೆಯು ಪ್ರಶಂಸಾರ್ಹವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ಹೋರಾಟದಲ್ಲಿ ಜನರ ಪಾತ್ರದ ಜತೆಗೆ ಮಾಧ್ಯಮಗಳ ಪಾತ್ರವು ಬಹಳ ಮುಖ್ಯವಾಗಿದೆ. ಉತ್ತಮ ನಗರದ ಅತ್ಯುತ್ತಮ ಪ್ರಜೆಗಳು ಎಂಬುದನ್ನು ಹೋರಾಟದ ಮೂಲಕ ಸಾಬೀತು ಪಡಿಸಿದ್ದಾರೆ.
ನಮ್ಮ ಬೆಂಗಳೂರು ಪ್ರತಿಷ್ಠಾನ ಸೇರಿದಂತೆ ಹಲವು ಸಂಘಟನೆಗಳು ಹೋರಾಟದಲ್ಲಿ ಕೈಜೋಡಿಸುವ ಮೂಲಕ ಗೆಲುವಿಗೆ ಕಾರಣರಾಗಿದ್ದಾರೆ. ಜನಪ್ರತಿನಿಗಳು ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಕಾರ್ಯನಿರ್ವಹಿಸಬೇಕೇ ಹೊರತು ನಗರದ ಖ್ಯಾತಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.
ಬೆಳ್ಳಂದೂರು ಕೆರೆ ಅಭಿವೃದ್ಧಿ, ಕಸ ಸಮಸ್ಯೆ ನಿರ್ವಹಣೆ, ಸಾರ್ವಜನಿಕ ಆರೋಗ್ಯ ಕಾಪಾಡುವುದು, ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ಧ್ವನಿ ಎತ್ತಲಾಗಿದೆ. ಸರ್ಕಾರದಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲಾಗುತ್ತದೆ. ಅವುಗಳು ಸುದೀರ್ಘ ಯೋಜನೆಯಾಗಿರಬೇಕು. ಅಲ್ಲದೇ, ಪ್ರತಿಯೊಂದು ಯೋಜನೆಗಳು ಮತ್ತು ಅವುಗಳಿಗೆ ಬಳಕೆ ಮಾಡುವ ಹಣವು ಪಾರದರ್ಶಕವಾಗಿರಬೇಕು. ಸಾರ್ವಜನಿಕರ ಹಣಕ್ಕೆ ಸರ್ಕಾರವು ಉತ್ತರದಾಯಿಯಾಗಿರಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.
