ಅತೃಪ್ತರ ಗುಂಪು ಸೇರಿದರಾ ಮತ್ತೋರ್ವ ಕೈ ಶಾಸಕ
ಅತೃಪ್ತ ಸಂಖ್ಯೆ ದಿನದಿನಕ್ಕೂ ಕಾಂಗ್ರೆಸ್ ನಲ್ಲಿ ಹೆಚ್ಚುತ್ತಲೆ ಇದೆ. ಇದೀಗ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಇ್ನನೂ ಹಲವು ಕೈ ಶಾಸಕರು ದಿಢೀರ್ ಪ್ರತ್ಯಕ್ಷರಾಗಿದ್ದಾರೆ.
ಬೆಂಗಳೂರು : ಕಾಂಗ್ರೆಸ್ನ ಅತೃಪ್ತ ಶಾಸಕರು ಕ್ರಿಯಾಶೀಲರಾಗಿದ್ದು, ಬಿಜೆಪಿಯತ್ತ ಅತೃಪ್ತರ ದಂಡಿನ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಬಿರುಸುಗೊಳಿಸಿರುವ ಲಕ್ಷಣಗಳು ಕಂಡುಬಂದಿವೆ. ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಬಿ.ಸಿ.ಪಾಟೀಲ್, ಡಾ| ಸುಧಾಕರ್ ಸೇರಿದಂತೆ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಹಲವು ಶಾಸ ಕರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇವರು ರಮೇಶ್ ಜಾರಕಿಹೊಳಿ ಅವರನ್ನು ಅಧಿಕೃತ ವಾಗಿ ಭೇಟಿ ಮಾಡಿಲ್ಲ. ಬಿ.ಸಿ. ಪಾಟೀಲ್ ಅವರಂತೂ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿಲ್ಲ ಎಂದು ಮಾಧ್ಯಮಗಳಿಗೆ ನೇರವಾಗಿ ಸ್ಪಷ್ಟಪಡಿಸಿದರು. ಅಲ್ಲದೆ, ಕಾಲಾಯ ತಸ್ಮೈ ನಮಃ ಎನ್ನುವ ಮೂಲಕ ಭವಿಷ್ಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಸಂದೇಶ ನೀಡಿದರು.
ಇದೇ ವೇಳೆ ಕಾಂಗ್ರೆಸ್ನ ಅತೃಪ್ತರ ಸಂಖ್ಯೆಯನ್ನು ಹೆಚ್ಚಿಸಲು ರಮೇಶ್ ಜಾರಕಿಹೊಳಿ ಬಣ ತನ್ನ ಪ್ರಯತ್ನ ವನ್ನು ಮುಂದುವರೆಸಿದೆ ಎನ್ನಲಾಗಿದೆ. ಅತೃಪ್ತರೊಂದಿಗೆ ಗುರುತಿಸಿಕೊಂಡ ಶಾಸಕರ ಮೇಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕೂಡ ಕಣ್ಣಿಟ್ಟಿದ್ದು, ಅವರಿಗೆ ಮೈತ್ರಿಕೂಟ ಸರ್ಕಾರದಲ್ಲೇ ಸಚಿವ ಸ್ಥಾನ ನೀಡುವ ಭರವಸೆಗಳನ್ನು ನೀಡತೊಡಗಿರುವುದರಿಂದ ಹೊಸಬರ ಅನ್ವೇಷಣೆಯಲ್ಲಿ ಈ ತಂಡವಿದೆ ಎಂದು ಹೇಳಲಾಗುತ್ತಿದೆ.
ವಿಶೇಷವಾಗಿ ಲಿಂಗಾಯತ ಪ್ರಾಧಾನ್ಯವಿರುವ ವಿಧಾನಸಭಾ ಕ್ಷೇತ್ರಗಳ ಸದಸ್ಯರನ್ನು ಸೆಳೆಯುವ ಉದ್ದೇಶವನ್ನು ಈ ತಂಡ ಹೊಂದಿದೆ ಎನ್ನಲಾಗಿದೆ. ಇಂತಹ ಕ್ಷೇತ್ರಗಳ ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಅವರ ಮರು ಆಯ್ಕೆ ಸುಲಭ ಎನ್ನುವ ಕಾರಣಕ್ಕೆ ಇಂತಹ ಶಾಸಕರ ಹುಡುಕಾಟ ನಡೆಸಿದೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಮೋದಿ ಹವಾ ಇರುವು ದನ್ನು ಸ್ಪಷ್ಟಪಡಿಸಿದೆ. ಜತೆಗೆ, ಲಿಂಗಾಯತ ಪ್ರಾಧಾನ್ಯ ವಿರುವ ಕ್ಷೇತ್ರಗಳಾದರೆ ಮೋದಿ ಹವಾ ಹಾಗೂ ಲಿಂಗಾಯತರ ಮತ ಬ್ಯಾಂಕನ್ನು ಬಳಸಿಕೊಂಡು ಉಪ ಚುನಾವಣೆಗಳಲ್ಲಿ ಗೆಲ್ಲಿಸಿಕೊಂಡು ಬರಬಹುದು ಎಂಬುದು ಲೆಕ್ಕಾಚಾರ.