‘‘ಬಹುತ್ವ ಮತ್ತು ವೈವಿಧ್ಯತೆಯತೆಯಲ್ಲಿ ದೇಶದ ಶಕ್ತಿ ಅಡಗಿದೆ. ‘ಭಾರತವು ಯಾವತ್ತೂ ‘ವಾದ-ಪ್ರತಿವಾದ ನಡೆಸುವ ‘ಭಾರತೀಯ’ನನ್ನು ಮೆಚ್ಚುತ್ತದೆಯೇ ಹೊರತು, ‘ಅಸಹಿಷ್ಣು ‘ಭಾರತೀಯನನ್ನಲ್ಲ’’ ಎಂದಿದ್ದಾರೆ ಪ್ರಣಬ್.
ನವದೆಹಲಿ(ಜ.25): ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಧಾನಿ ಮೋದಿ ಅವರ ಇಂಗಿತಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ‘ಧನಿಗೂಡಿಸಿದ್ದಾರೆ. ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಏಕಕಾಲಕ್ಕೆ ಚುನಾವಣೆ ನಡೆಸುವ ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಚುನಾವಣಾ ಆಯೋಗಕ್ಕೆ ಅವರು ಸಲಹೆ ನೀಡಿದ್ದಾರೆ. ಜತೆಗೆ, ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮವನ್ನೂ ಅವರು ಬೆಂಬಲಿಸಿದ್ದಾರೆ.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ರಾಷ್ಟ್ರಪತಿ ಪ್ರಣಬ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ‘‘ಬಹುತ್ವ ಮತ್ತು ವೈವಿಧ್ಯತೆಯತೆಯಲ್ಲಿ ದೇಶದ ಶಕ್ತಿ ಅಡಗಿದೆ. ‘ಭಾರತವು ಯಾವತ್ತೂ ‘ವಾದ-ಪ್ರತಿವಾದ ನಡೆಸುವ ‘ಭಾರತೀಯ’ನನ್ನು ಮೆಚ್ಚುತ್ತದೆಯೇ ಹೊರತು, ‘ಅಸಹಿಷ್ಣು ‘ಭಾರತೀಯನನ್ನಲ್ಲ’’ ಎಂದಿದ್ದಾರೆ ಪ್ರಣಬ್.
‘‘ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಬಹು ದೃಷ್ಟಿಕೋನಗಳು, ಬಹು ಆಲೋಚನೆಗಳು ಹಾಗೂ ತತ್ವ-ಸಿದ್ಧಾಂತಗಳು ಶಾಂತಿಯುತವಾಗಿ ಪರಸ್ಪರ ಸ್ಪರ್ಧೆ ಮಾಡಿಕೊಂಡು ಬಂದಿವೆ. ಪ್ರಜಾಸತ್ತೆಯು ಪ್ರಕಾಶಿಸಬೇಕೆಂದರೆ ಬುದ್ಧಿವಂತ ಮತ್ತು ಸೂಕ್ಷ್ಮ ವಿವೇಚನೆಯ ಮನಸ್ಸುಗಳು ಬೇಕು,’’ ಎಂದೂ ಪ್ರಣಬ್ ಹೇಳಿದ್ದಾರೆ.
