ಬಿಜೆಪಿ ಬಡಿಯಲು ಪ್ರಶಾಂತ್ ಕಿಶೋರ್ YIP: ಪ್ಲ್ಯಾನ್ ಕೇಳಿ ದೀದಿ ಫುಲ್ ಹ್ಯಾಪಿ!
ಪ.ಬಂಗಾಳಕ್ಕೆ ಲಗ್ಗೆ ಇಟ್ಟ ರಾಜಕೀಯ ಚತುರ ಪ್ರಶಾಂತ್ ಕಿಶೋರ್| ಮಮತಾ ಪಕ್ಷ ಟಿಎಂಸಿಗೆ ಟಾನಿಕ್ ಆಗಲಿದೆಯಾ i-pac ಸಂಸ್ಥೆ?| ಬಂಗಾಳದಲ್ಲಿ ವೃದ್ಧಿಸುತ್ತಿರುವ ಬಿಜೆಪಿ ಬೆಳವಣಿಗೆ ಕಂಡು ದಂಗಾದ ಮಮತಾ| ಬಿಜೆಪಿ ಬೆಳವಣಿಗೆ ತಡೆಯಲು ಪ್ರಶಾಂತ್ ಕಿಶೋರ್ ಮೊರೆ ಹೋದ ಟಿಎಂಸಿ| YIP ಯೋಜನೆ ಮೂಲಕ ಟಿಎಂಸಿ ಪಕ್ಷದ ನೆರವಿಗೆ ಬಂದ ಪ್ರಶಾಂತ್ ಕಿಶೋರ್|
ಕೋಲ್ಕತ್ತಾ(ಜು.11): ಪ.ಬಂಗಾಳದಲ್ಲಿ ವೃದ್ಧಿಸುತ್ತಿರುವ ಬಿಜೆಪಿ ಪ್ರಭಾವ ಕಂಡು ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಂಗೆಟ್ಟಿರುವುದು ಸುಳ್ಳಲ್ಲ. ಎಡಪಕ್ಷಗಳ ಭದ್ರಕೋಟೆಯನ್ನು ಸೀಳಿ ಅಧಿಕಾರ ಪಡೆದಿರುವ ಮಮತಾಗೆ ಬಿಜೆಪಿ ತನ್ನ ಅಧಿಕಾರ ಕಸಿಯಲಿದೆ ಎಂಬ ಭಯ ಶುರುವಾಗಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ಬಂಗಾಳದಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳುತ್ತಿರುವ ಬಿಜೆಪಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬರೋಬ್ಬರಿ 18 ಸೀಟುಗಳನ್ನು ಗೆದ್ದು ಬೀಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬಿಜೆಪಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಸಂಘಟನಾತ್ಮಕವಾಗಿ ಬಿಜೆಪಿ ಅತ್ಯಂತ ಚುರುಕುತನದಿಂದ ಕೆಲಸ ಮಾಡುತ್ತಿದೆ. ಸಿಪಿಎಂ ಪ್ರಭಾವ ಕುಗ್ಗಿಸಿ ರಾಜ್ಯಾದ್ಯಂತ ಪಕ್ಷದ ವರ್ಚಸ್ಸು ವೃದ್ಧಿಸಿದ್ದ ಟಿಎಂಸಿಗೆ ಈ ಬೆಳವಣಿಗೆ ನಿಜಕ್ಕೂ ಆತಂಕ ತಂದಿದೆ.
ಈ ಕಾರಣಕ್ಕೆ ಪ.ಬಂಗಾಳಧ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇದೀಗ ರಾಜಕೀಯ ಚತುರ ಪ್ರಶಾಂತ್ ಕಿಶೋರ್ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಟಿಎಂಸಿ ಮತ್ತೆ ಟಿಎಂಸಿ ಪ್ರಭಾವ ಮರುಕಳಿಸುವಂತೆ ಕೋರಿ ಕಿಶೋರ್ ಅವರ ಸಲಹೆ ಬಯಿಸಿದ್ದಾರೆ ಮಮತಾ ಬ್ಯಾನರ್ಜಿ.
i-pac ಸಂಸ್ಥೆಯ ಮೂಲಕ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದ ಪ್ರಶಾಂತ್ ಕಿಶೋರ್, ಸದ್ಯ ದೇಶದ ಅತ್ಯಂತ ಯಶಸ್ವಿ ರಾಜಕೀಯ ಪಂಡಿತ ಎಂದರೆ ತಪ್ಪಾಗಲಾರದು. ಅತ್ಯಂತ ಕರಾರುವಕ್ಕಾದ ಯೋಜನೆ, ಕ್ರಮಬದ್ಧ ವಿಶ್ಲೇಷಣೆಯ ಮೂಲಕ ಪ್ರಶಾಂತ್ ಕಿಶೋರ್ ದೇಶದ ಎಲ್ಲಾ ರಾಜಕೀಯ ಪಕ್ಷಗಳ ಹಾಟ್ ಫೆವರಿಟ್ ಆಗಿ ಹೊರಹೊಮ್ಮಿದ್ದಾರೆ.
ಬಿಜೆಪಿಯಿಂದ ದೂರವಾದ ಪ್ರಶಾಂತ್ ಕಿಶೋರ್ ಬಳಿಕ ಜೆಡಿಯು ಸೇರಿ ಆ ಪಕ್ಷವನ್ನೂ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ದಡ ಸೇರಿಸಿದ್ದು ಇದೀಗ ಇತಿಹಾಸ. ಇದೇ ಕಾರಣಕ್ಕೆ ಕಿಶೋರ್ ಅವರನ್ನು ಬಂಗಾಳಕ್ಕೆ ಕರೆಸಿಕೊಂಡಿರುವ ಮಮತಾ, ಹೇಗಾದರೂ ಮಾಡಿ ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವಂತೆ ಮನವಿ ಮಾಡಿದ್ದಾರೆ.
ಅದರಂತೆ ರಾಜ್ಯಕ್ಕೆ YIP(ಯುತ್ ಇನ್ ಪಾಲಿಟಿಕ್ಸ್) ಎಂಬ ಯೋಜನೆಯೊಂದಿಗೆ ಲಗ್ಗೆ ಇಟ್ಟಿರುವ ಪ್ರಶಾಂತ್ ಕಿಶೋರ್, ರಾಜ್ಯದ ಯುವ ಮತದಾರರನ್ನು ಸೆಳೆಯಲು ಜಬರ್ದಸ್ತ್ ಪ್ಲ್ಯಾನ್ ಮಾಡಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿರುವ ನಗರದ ಶಿಕ್ಷಿತ ಯುವ ಸಮುದಾಯಯವೇ ಪ್ರಶಾಂತ್ ಕಿಶೋರ್ ಅವರ ಟಾರ್ಗೆಟ್. ರಾಜ್ಯಕ್ಕೆ ಬಿಜೆಪಿಗಿಂತ ಟಿಎಂಸಿ ಏಕೆ ಅವಶ್ಯಕ ಎಂಬುದರ ಕುರಿತು i-pac ಸಂಸ್ಥೆ ಇದೀಗ YIP ಕಾರ್ಯಾಗಾರದ ಮೂಲಕ ಯುವ ಸಮುದಾಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ.
ಆದರೆ YIP ಕಾರ್ಯಾಗಾರ ಕೇವಲ ಯುವ ಸಮುದಾಯಕ್ಕೆ ರಾಜಕೀಯ ತರಬೇತಿ ನೀಡುವುದಾಗಿದೆ ಎಂದು i-pac ಹೇಳುತ್ತಿದ್ದರೂ, ಅಸಲಿಗೆ ಟಿಎಂಸಿ ಪರ ಯುವ ಸಮುದಾಯವನ್ನು ಸೆಳೆಯುವ ತಂತ್ದ ಭಾಗವಾಗಿ YIP ಕೆಲಸ ಮಾಡುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.