ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಬಂದ್ ಆಗುವ ಭೀತಿ ?
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯೊಂದಕ್ಕೆ ಅನುದಾನವು ಸ್ಟಾಪ್ ಆಗಿದ್ದು ಇದೀಗ ಈ ಯೋಜನೆ ನಿಲ್ಲುವ ಭೀತಿ ಎದುರಾಗಿದೆ.
ಬೆಂಗಳೂರು : ಕೃಷಿ ಭೂಮಿಯ ಸುತ್ತಲಿನ ಜಲಮೂಲಗಳ ಅಭಿವೃದ್ಧಿ ಮತ್ತು ಅಂತರ್ಜಲ ಮರುಪೂರಣ ಮಾಡುವುದೂ ಸೇರಿದಂತೆ ರೈತರ ಸಮಗ್ರ ಅಭಿವೃದ್ಧಿಗಾಗಿ ಪ್ರಾರಂಭವಾಗಿದ್ದ ‘ಕೃಷಿ ಸಿಂಚಾಯಿ’ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನಿಲ್ಲಿಸಿದ್ದು, ಈ ಯೋಜನೆಯೇ ತಟಸ್ಥಗೊಳ್ಳುವ ಭೀತಿ ಎದುರಾಗಿದೆ.
ಕೃಷಿ, ಹೈನುಗಾರಿಕೆ, ತೋಟಗಾರಿಕೆಯ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.60 ಅನುದಾನ ನೀಡುತ್ತಿತ್ತು. ರಾಜ್ಯ ಸರ್ಕಾರ ಶೇ.40ರಷ್ಟುವೆಚ್ಚ ಭರಿಸಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಕಳೆದ ಆಗಸ್ಟ್ ತಿಂಗಳಿನಿಂದ ಅನುದಾನ ಬಿಡುಗಡೆ ನಿಲ್ಲಿಸಿದೆ. ಅಲ್ಲದೆ, ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಮನವಿಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ತಿರಸ್ಕರಿಸಿದ್ದು, ಇನ್ನುಮುಂದೆ ಈ ಯೋಜನೆಯನ್ನು ರಾಜ್ಯದ ಸಂಪನ್ಮೂಲದಿಂದಲೇ ಮುನ್ನಡೆಸುವಂತೆ ಸೂಚಿಸಿದೆ ಎಂದು ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
2017-18ನೇ ಸಾಲಿನಲ್ಲಿ ಕೃಷಿ ಸಿಂಚಾಯಿ ಯೋಜನೆಗೆ ಒಟ್ಟು 327.5 ಕೋಟಿ ನಿಗದಿ ಮಾಡಲಾಗಿತ್ತು. ಈ ಮೊತ್ತದಲ್ಲಿ ಕೇಂದ್ರದ ಅನುದಾನದಲ್ಲಿ 101.07 ಕೋಟಿ ರು.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಮೊತ್ತ ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಯೋಜನೆಯನ್ನು ಮುಂದುವರೆಸಲು ರಾಜ್ಯ ಸರ್ಕಾರದಿಂದಲೂ ಅನುದಾನಕ್ಕಾಗಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಹಣಕಾಸು ಇಲಾಖೆ, ನರೇಗಾ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದೆ. ಆದರೆ, ನರೇಗಾ ಯೋಜನೆಯ ಹಣವನ್ನು ಕೃಷಿ ಸಿಂಚಾಯಿ ಯೋಜನೆಗೆ ಬಳಕೆ ಮಾಡಿಕೊಳ್ಳಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಪರಿಣಾಮ ಯೋಜನೆ ತಟಸ್ಥಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಯೋಜನೆಯ ಉದ್ದೇಶ:
ಕೃಷಿ ಭೂಮಿಗೆ ಸರಳ ಹಾಗೂ ಸಮರ್ಥ ನೀರಾವರಿ ಸೌಲಭ್ಯ ಒದಗಿಸುವ, ಲಭ್ಯ ನೀರನ್ನು ಸೂಕ್ತವಾಗಿ ಬಳಸುವ ವಿಧಾನಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಈ ಯೋಜನೆಯ ಪ್ರಮುಖ ಗುರಿ.
ಅಲ್ಲದೆ, ಕೃಷಿ ಅಭಿವೃದ್ಧಿಗಾಗಿ ಸಚಿವಾಲಯಗಳು, ಸಂಘ ಸಂಸ್ಥೆಗಳನ್ನು, ಸಂಶೋಧಕರು ಮತ್ತು ಹಣಕಾಸು ಸಂಸ್ಥೆಗಳನ್ನು ಒಗ್ಗೂಡಿಸುವುದು, ಈ ಎಲ್ಲ ಕ್ಷೇತ್ರಗಳಿಂದ ಕೃಷಿ ಮತ್ತು ನೀರಾವರಿಗೆ ಸಂಬಂಧಪಟ್ಟವಿಶೇಷ ವಿಧಾನಗಳು ಮತ್ತು ಮಾದರಿಗಳನ್ನು ವಿನ್ಯಾಸಪಡಿಸುವುದು, ಅವುಗಳನ್ನು ಕೃಷಿಯಲ್ಲಿ ಅಳವಡಿಸುವಂತೆ ರೈತರಿಗೆ ಉತ್ತೇಜನ ನೀಡುವುದು ಹಾಗೂ ಅದಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು.
ಕೃಷಿ ಸಿಂಚಾಯಿ ಯೋಜನೆಗೆ ಆಗಸ್ಟ್ ತಿಂಗಳಿನಿಂದ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನುಮುಂದೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ, ರಾಜ್ಯದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರದ ಮೂಲಕ ತಿಳಿಸಿದೆ. ಇದರಿಂದ ಪ್ರಗತಿಯ ಹಂತದಲ್ಲಿದ್ದ ಯೋಜನೆ ಸ್ಥಗಿತಗೊಂಡಿದೆ.
- ಪ್ರಭಾಷ್ ಚಂದ್ರ ರೇ - ಜಲಾನಯನ ಇಲಾಖೆ ಆಯುಕ್ತ
ವರದಿ : ರಮೇಶ್ ಬನ್ನಿಕುಪ್ಪೆ