2ನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಮನ್ ಕಿ ಬಾತ್ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಹೊಸ ಅಭಿಯಾನಕ್ಕೆ ಕರೆ ನೀಡಿದ್ದಾರೆ. 

ನವದೆಹಲಿ [ಜು.1]: ದೇಶದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆಗೆ ‘ಸ್ವಚ್ಛ ಭಾರತ’ ರೀತಿ ಜನಾಂದೋಲನ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಜಲಸಂರಕ್ಷಣೆಗೆ ಸಂಬಂಧಿಸಿದ ಆಲೋಚನೆ ಹಾಗೂ ಪ್ರೇರಣೆಗಳನ್ನು ‘ಜಲಶಕ್ತಿಗಾಗಿ ಜನಶಕ್ತಿ’ ಎಂಬ ಹ್ಯಾಷ್‌ಟ್ಯಾಗ್‌ನಡಿ ಹಂಚಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಧಾನಿಯಾಗಿ ಪುನರಾಯ್ಕೆಯಾದ ಬಳಿಕ ಮೊದಲ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಸವಾಲುಗಳನ್ನು ಎದುರಿಸಲು ಸಾಮೂಹಿಕ ಪ್ರಯತ್ನಗಳನ್ನು ನಡೆಸಿದಾಗ ದೇಶ ಬೃಹತ್ ಬದಲಾವಣೆಗಳಿಗೆ ಸಾಕ್ಷಿಯಾಗುತ್ತದೆ.
ನಾವೆಲ್ಲಾ ಒಗ್ಗೂಡಿದರೆ, ಕಠಿಣವಾಗಿ ದುಡಿದರೆ ಕಷ್ಟದ ಕೆಲಸವನ್ನೂ ಮಾಡಿ ಮುಗಿಸಬಹುದು.

ಹೀಗಾಗಿ ಜನತೆ ಜಲಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಸ್ವಚ್ಛತಾ ಕೆಲಸ ರೀತಿ ಜಲ ಸಂರಕ್ಷಣೆಯನ್ನು ಜನಾಂದೋಲನವಾಗಿ ಪರಿ ವರ್ತಿಸಬೇಕು ಎಂದು ಸಲಹೆ ಮಾಡಿದರು. ಜಲಸಂರಕ್ಷಣೆ ಕುರಿತ ಜಾಗೃತಿ ಮೂಡಿಸುವ ಕಾಯಕದಲ್ಲಿ ಚಲನಚಿತ್ರೋದ್ಯಮ, ಕ್ರೀಡಾ ಪಟುಗಳು, ಮಾಧ್ಯಮ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು ಭಾಗಿಯಾಗಬೇಕು. 

ರಚನಾತ್ಮಕ ಅಭಿಯಾನಗಳ ಮೂಲಕ ಇದನ್ನು ನಡೆಸಬೇಕು. ನೀರಿನ ಸಂರಕ್ಷಣೆಗೆ ಇರುವ ಸಾಂಪ್ರದಾಯಿಕ ವಿಧಾನಗಳ ಮಾಹಿತಿಯನ್ನು ಹಂಚಿಕೊಳ್ಳಬೇಕು. ಜಲಸಂರಕ್ಷಣೆಗಾಗಿ ದುಡಿಯುತ್ತಿರುವ ವ್ಯಕ್ತಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಮಾಹಿತಿಯನ್ನು ಪಸರಿಸಬೇಕೆಂದು ಹೇಳಿದರು. ಪ್ರತಿ ವರ್ಷ ದೇಶದ ಹಲವು ಭಾಗ ಗಳಲ್ಲಿ ನೀರಿನ ಕೊರತೆ ಕಾಡುತ್ತದೆ. 

ಒಂದು ವರ್ಷದಲ್ಲಿ ಆಗುವ ಮಳೆಯ ಪೈಕಿ ಶೇ.8 ರಷ್ಟು ನೀರನ್ನು ಮಾತ್ರವೇ ನಾವು ಹಿಡಿದಿಡುತ್ತೇವೆ ಎಂಬ ಸಂಗತಿ ಕೇಳಿದರೆ ಆಶ್ಚರ್ಯವಾಗಬಹುದು. ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯವ ಕಾಲ ಬಂದಿದೆ. ಇತರೆ ಸಮಸ್ಯೆಗಳಂತೆ ಇದನ್ನೂ ಜನರ
ಸಹಭಾಗಿತ್ವದಿಂದ ಪರಿಹರಿಸಬಹುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಜಲಸಂರಕ್ಷಣೆಗೆ ಸಂಬಂಧಿಸಿದ ಆಲೋಚನೆ ಹಾಗೂ ಪ್ರೇರಣೆಗಳನ್ನು "#JanShakti4JalShakti' ಎಂಬ ಹ್ಯಾಷ್‌ಟ್ಯಾಗ್‌ನಡಿ ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದರು.