ಹೋಮ-ಹವನ ಮಾಡುವ ಮೂಲಕ ಮೂಢನಂಬಿಕೆಗಳನ್ನು ಸರ್ಕಾರವೇ ಬೆಂಬಲಿಸುತ್ತಿದೆ ಎನ್ನುವ ಮಾತು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಪ್ರತಿಪಕ್ಷ ಮುಖಂಡ ಜಗದೀಶ ಶೆಟ್ಟರ್ ಪರ್ಜನ್ಯ ಹೋಮವನ್ನು ಮೂಢನಂಬಿಕೆ ಅಂತ ಜರಿದರು. ಇನ್ನೂ ಇಂದು ಕೂಡ ವಿಒಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಹಲವು ಪ್ರಬಲ ಅಸ್ತ್ರಗಳನ್ನ ಸಿದ್ಧಪಡಿಸಿಕೊಂಡಿವೆ.

ಬೆಂಗಳೂರು(ಜೂ.06): ಹೋಮ-ಹವನ ಮಾಡುವ ಮೂಲಕ ಮೂಢನಂಬಿಕೆಗಳನ್ನು ಸರ್ಕಾರವೇ ಬೆಂಬಲಿಸುತ್ತಿದೆ ಎನ್ನುವ ಮಾತು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಪ್ರತಿಪಕ್ಷ ಮುಖಂಡ ಜಗದೀಶ ಶೆಟ್ಟರ್ ಪರ್ಜನ್ಯ ಹೋಮವನ್ನು ಮೂಢನಂಬಿಕೆ ಅಂತ ಜರಿದರು. ಇನ್ನೂ ಇಂದು ಕೂಡ ವಿಒಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಹಲವು ಪ್ರಬಲ ಅಸ್ತ್ರಗಳನ್ನ ಸಿದ್ಧಪಡಿಸಿಕೊಂಡಿವೆ.

Add Asianetnews Kannada as a Preferred SourcegooglePreferred

ಮಳೆಗಾಲದ ಅಧಿವೇಶನ ಆರಂಭವಾಗಿದೆ. ಮೊದಲ ದಿನವಾದ ನಿನ್ನೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ಶುರು ಆಗ್ತಿದ್ದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಕೊಂಡಜ್ಜಿ ಮೋಹನ್ ಹಾಗೂ ಪಿ ಆರ್ ರಮೇಶ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿ ಬಳಿಕ ಕಲಾಪ ಇಂದಿಗೆ ಮುಂದೂಡಲಾಗಿದೆ.

ಇತ್ತ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಬರದ ಮೇಲಿನ ಚರ್ಚೆಗೆ ಸ್ಪೀಕರ್ ಕೋಳಿವಾಡ ಅವಕಾಶ ನೀಡಿದರು. ಈ ವೇಳೆ, ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ಅವರು ಮಳೆಗಾಗಿ ನಡೆಸಿದ ಪರ್ಜನ್ಯ ಹೋಮವನ್ನು ಟೀಕಿಸಿದರು. ಮೂಢನಂಬಿಕೆ ವಿರುದ್ಧ ಕಾಯ್ದೆ ತರಲು ಹೊರಟ ಸರ್ಕಾರವೇ ಮೂಢನಂಬಿಕೆಯಂತಹ ಹೋಮ-ಹವನ ಮೂಲಕ ಜನರ ಹಾದಿ ತಪ್ಪಿಸುತ್ತಿದೆ ಅಂತ ಕಿಡಿಕಾರಿದರು. ಈ ಮೂಲಕ ಬಸವಣ್ಣನಿಗೆ ಸರ್ಕಾರ ಅವಮಾನ ಮಾಡಿದ ಅಂತಲೂ ಟೀಕಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತಾಡಿದ ಸಿಎಂ ಸಿದ್ರಾಮಯ್ಯ, ಮೂಢನಂಬಿಕೆಗಳ ವಿರೋಧಿ ಕಾಯ್ದೆ ಸದನಕ್ಕೆ ಬಂದಾಗ ಆ ಬಗ್ಗೆ ಮಾತಾಡಿ.. ಈಗ ಬರದ ಮೇಲೆ ಚರ್ಚೆ ಮಾಡಿ ಅಂತ ಹೇಳಿದರು. ಇದೇ ಟೈಮ್ನಲ್ಲಿ ಮಧ್ಯಪ್ರವೇಶಿಸಿದ ಸಿಟಿ ರವಿ, ಪರ್ಜನ್ಯ ಹೋಮವನ್ನ ಸಮರ್ಥಿಸಿಕೊಂಡಿದ್ದು ಅಚ್ಚರಿ ಮೂಡಿಸಿತು.

ಪ್ರಶ್ನೋತ್ತರ ಕಲಾಪದಲ್ಲಿ ಪೋಡಿಮುಕ್ತ ಗ್ರಾಮ ಯೋಜನೆಗೆ ಅಧಿಕಾರಿಗಳು ಸಹಕರಿಸುತ್ತಿಲ್ಲ ಎನ್ನುವ ಬಿಜೆಪಿ ಆರೋಪವನ್ನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಒಪ್ಪಿಕೊಂಡರು. ಇನ್ನೂ ಇಂದಿನ ಅಧಿವೇಶನದಲ್ಲಿ ಬರಗಾಲ ಹಾಗೂ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಸೇರಿದಂತೆಹಲವು ಮಹತ್ವದ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆ ಇದೆ.