ಗೌಡರ ಮಣಿಸುವ ಶಕ್ತಿ ದೇವರು, ಜನರಿಗೆ ಮಾತ್ರ: ರೇವಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ನಡುವಿನ ಫೋನ್ ಸಂಭಾಷಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ನಡುವಿನ ಫೋನ್ ಸಂಭಾಷಣೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
‘ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು ಗೆದ್ದದ್ದು ಸಾಕು. ರೇವಣ್ಣರನ್ನು ಸೋಲಿಸಿ ನೀ ಗೆದ್ದು ಬಾ. ಮೊದಲು ನಿನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಕ್ಷೇತ್ರಕ್ಕೆ ತೆರಳು ಎಂದು’ ಸಿದ್ದರಾಮಯ್ಯ ಹಾಗೂ ಮಂಜೇಗೌಡರು ನಡೆಸಿದ್ದರೂ ಎನ್ನಲಾದ ಆಡಿಯೋ ಸಂಭಾಷಣೆ ಜಿಲ್ಲಾದ್ಯಾಂತ ವೈರಲ್ ಆಗಿತ್ತು. ಈ ಬಗ್ಗೆ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ‘ಸಮಯ ಬಂದಾಗ ಇದಕ್ಕೆ ಉತ್ತರ ನೀಡುವೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ದೇವೇಗೌಡರ ಮನೆಯವರನ್ನು ರಾಜಕೀಯದಿಂದ ದೂರ ಮಾಡುವ ಶಕ್ತಿ ಇರುವುದು ದೇವರು ಮತ್ತು ಜನರಿಗೆ ಮಾತ್ರ. ಇದರ ನಡುವೆ ಯಾರೇ ಬಂದರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದು ತಿರುಗೇಟು ನೀಡಿದರು.
‘ಜೆಡಿಎಸ್ ಪಕ್ಷವನ್ನು ಉಳಿಸಿ, ಬೆಳೆಸಿ ಎಂದು ಜಿಲ್ಲೆಯ ಜನತೆಯನ್ನು ಕೋರಿಕೊಳ್ಳುತ್ತೇನೆ. ಅದನ್ನು ಹೊರತು ಪಡಿಸಿ ಅವರಂಥ ಸಣ್ಣತನಕ್ಕೆ ನಾನು ಇಳಿಯುವುದಿಲ್ಲ. ನನ್ನ ಕ್ಷೇತ್ರಕ್ಕೇ ಕುಡಿಯುವ ನೀರಿಗೆ .7 ಕೋಟಿ ಅನುದಾನ ಕೊಡಬೇಕು. ಮೊದಲು ಅದನ್ನು ನೀಡಿ ಆನಂತರ ಮಾತಾಡಲಿ’ ಎಂದು ಹೆಸರೆತ್ತದೇ ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.