ತಾಯಿ ಶವ ಹೆಗಲ ಮೇಲೆ ಹೊತ್ತೊಯ್ದ ಹೆಣ್ಣು ಮಕ್ಕಳು: ಸುಡಲು ಕಟ್ಟಿಗೆ ಇಲ್ಲದೇ ಮನೆಯನ್ನೇ ಮುರಿದರು
ಒಡಿಶಾ(ಸೆ.26): ಒಡಿಶಾದ ಕಲಹಂದಿಯಲ್ಲಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ಯಾರೂ ಬಾರದೆ, ಸುಡಲು ಕಟ್ಟಿಗೆ ಇಲ್ಲದೆ ಆ ತಾಯಿಯ ನಾಲ್ವರು ಹೆಣ್ಣು ಮಕ್ಕಳು ನರಳಿದ ಘಟನೆ ನಡೆದಿದೆ.
75 ವರ್ಷದ ತಾಯಿ ಕನಕ ಸತ್ಪತಿ ಶುಕ್ರವಾರ ಸಾವನ್ನಪ್ಪಿದ್ದಾರೆ. ತಾಯಿಯ ದೇಹವನ್ನು ಸ್ಮಶಾನಕ್ಕೆ ಸಾಗಿಸಲು ನಾಲ್ವರು ಹೆಣ್ಣು ಮಕ್ಕಳು ಸಾರ್ವಜನಿಕರ ಸಹಾಯ ಕೋರಿದ್ದಾರೆ. ಇವರ ಸಹಾಯಕ್ಕೆ ಯಾರು ಬಂದಿಲ್ಲ.
ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆ ಇಲ್ಲದೆ ಪರದಾಡಿದ್ದಾರೆ. ಹಾಗೋ ಹೀಗೋ ತಾಯಿಯ ಮೃತ ದೇಹವನ್ನು ಹೊತ್ತುಕೊಂಡು ಸ್ಮಶಾನಕ್ಕೆ ಹೋಗಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆ ಇಲ್ಲದ ಕಾರಣಕ್ಕೆ ತಾವು ವಾಸಿಸುವ ಮನೆಯ ಛಾವಣಿಯ ಕಟ್ಟಿಗೆಗಳನ್ನೇ ತಾಯಿ ಅಂತ್ಯ ಸಂಸ್ಕಾರಕ್ಕೆ ಬಳಸಿ, ಕಾರ್ಯ ನಿರ್ವಹಿಸಿದ್ದಾರೆ.
ಮೃತ ತಾಯಿಗೆ ನಾಲ್ವರು ಹೆಣ್ಣು ಮಕ್ಕಳು. ಅವರಲ್ಲಿ ಇಬ್ಬರು ವಿಧವೆಯರು. ಇನ್ನಿಬ್ಬರ ಗಂಡಂದಿರು ಅವರ ಜೊತೆ ವಾಸಿಸುತ್ತಿಲ್ಲ. ಇವರು ಪ್ರತಿ ನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಒಡಿಶಾದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದು ವಿಷಾದನೀಯ.