ನೋಟು ರದ್ದತಿ ಬಗ್ಗೆ ಆರ್ಬಿಐ ನೀಡಿತ್ತು ಈ ಎಚ್ಚರಿಕೆ
ಕಳೆದ 2 ವರ್ಷಗಳ ಹಿಂದೆ ನೋಟು ಅಮಾನ್ಯ ಮಾಡುವಾಗ ಆರ್ ಬಿಐ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಇದರಿಂದ ಕಾಳಧನ ನಿವಾರಣೆ ಆಗುವುದಿಲ್ಲ ಎಂದು ತಿಳಿಸಿತ್ತು ಎನ್ನಲಾಗಿದೆ.
ನವದೆಹಲಿ: ಅಪನಗದೀಕರಣ ನಿರ್ಧಾರಕ್ಕೆ ಕಪ್ಪು ಹಣ ಹಾಗೂ ಖೋಟಾ ನೋಟು ದಂಧೆ ಮಟ್ಟಹಾಕುವ ಕಾರಣ ನೀಡುವುದಕ್ಕೆ ಭಾರತೀಯ ರಿಸವ್ರ್ ಬ್ಯಾಂಕ್ (ಆರ್ಬಿಐ) ಆಕ್ಷೇಪ ಎತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ಬಂದಿ ನಿರ್ಧಾರ ಘೋಷಣೆ ಮಾಡುವುದಕ್ಕೆ ಕೆಲವೇ ತಾಸು ಮುನ್ನ ಈ ಕುರಿತು ತನ್ನ ಅತೃಪ್ತಿಯನ್ನು ಆರ್ಬಿಐ ತೋರ್ಪಡಿಸಿಕೊಂಡಿತ್ತು.
2016ರ ನ.8ರಂದು ಕೇಂದ್ರ ಸರ್ಕಾರ ತರಾತುರಿಯಲ್ಲಿ ಆರ್ಬಿಐನ ಕೇಂದ್ರೀಯ ಮಂಡಳಿ ಸಭೆಯನ್ನು ಕರೆದಿತ್ತು. ಆ ಸಭೆಯಲ್ಲಿ ಅಪನಗದೀಕರಣ ಎಂಬುದು ಪ್ರಶಂಸೆಯ ನಿರ್ಧಾರ ಎಂದು ಮಂಡಳಿ ಹೇಳಿತ್ತು. ಆದರೆ ಖೋಟಾನೋಟು ಹಾಗೂ ಕಾಳಧನದ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಸರ್ಕಾರದ ಸಮರ್ಥನೆಯನ್ನು ತಳ್ಳಿ ಹಾಕಿತ್ತು.
ದೇಶದಲ್ಲಿ ಬಹುತೇಕ ಕಪ್ಪು ಹಣವನ್ನು ರಿಯಲ್ ಎಸ್ಟೇಟ್ ಹಾಗೂ ಚಿನ್ನದಂತಹ ರೂಪದಲ್ಲಿ ಇಡಲಾಗಿದೆ. ಹೀಗಾಗಿ ನೋಟು ರದ್ದತಿಯಿಂದ ಅದರ ಮೇಲೆ ಹೇಳಿಕೊಳ್ಳುವಂತಹ ಪರಿಣಾಮವೇನೂ ಆಗದು. ಇನ್ನು ಖೋಟಾ ನೋಟು ದೇಶದಲ್ಲಿ ಹೆಚ್ಚೆಂದರೆ 400 ಕೋಟಿ ರು.ನಷ್ಟಿದೆ ಎಂದು ಹೇಳಿತ್ತು. ಆ ಸಭೆಯ ಟಿಪ್ಪಣಿಗಳು ತನಗೆ ಲಭ್ಯವಾಗಿವೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಅಪನಗದೀಕರಣ ಎಂಬುದು ಕಪ್ಪುಹಣವನ್ನು ಬಿಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹೂಡಿದ್ದ ತಂತ್ರ.
- ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ