ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಪಕ್ಷದ ಶಾಸಕರುಗಳ ಅಸಮಾಧಾನ ಮುಂದುವರಿದಿದ್ದು, ಬಿ.ಆರ್ ಪಾಟೀಲ್, ರಾಜು ಕಾಗೆ ಬಳಿಕ ಮತ್ತೊಬ್ಬ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮುರು/ಚಿತ್ರದುರ್ಗ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸ್ವಪಕ್ಷದ ಶಾಸಕರುಗಳ ಅಸಮಾಧಾನ ಮುಂದುವರಿದಿದ್ದು, ಬಿ.ಆರ್ ಪಾಟೀಲ್, ರಾಜು ಕಾಗೆ ಬಳಿಕ ಮತ್ತೊಬ್ಬ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಶಾಸಕನಾಗಿದ್ದುಕೊಂಡು ನಮ್ಮ ಗ್ರಾಮಗಳಲ್ಲಿ ಒಂದು ಚರಂಡಿ ಮಾಡಿಸುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂದು ಮೊಳಕಾಲ್ಮುರು ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಕಣ್ಕುಪ್ಪೆಯಲ್ಲಿ ಸೋಮವಾರ ಖಾಸಗಿ ಕಂಪನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಶಾಸಕನಾದ ನನಗೆ ನನ್ನ ಕ್ಷೇತ್ರದ ಹಳ್ಳಿಗಳಲ್ಲಿ ಒಂದು ಚರಂಡಿ ಅಥವಾ ರಸ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಒಳ್ಳೆಯ ಶಾಲೆ ಕಟ್ಟಲು ಆಗ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಕಂಪನಿಯವರು ಇಲ್ಲಿಗೆ ಬಂದು ದೊಡ್ಡ ಫ್ಯಾಕ್ಟರಿ ಕಟ್ಟಿ ನಡೆಸುತ್ತಾರೆ ಎಂದರೆ ಅದು ನಮ್ಮ ಪುಣ್ಯ‘ ಎಂದರು. ಆ ಮೂಲಕ ಸರ್ಕಾರದಿಂದ ತಮಗೆ ಆಗುತ್ತಿರುವ ಅನುದಾನ ಕೊರತೆಯನ್ನು ಪರೋಕ್ಷವಾಗಿ ಹೊರ ಹಾಕಿದರು.
ಕಾಂಗ್ರೆಸ್ ಪಕ್ಷದ ಆಂತರಿಕ ಅಸಮಾಧಾನ ಮತ್ತೆ ಒಂದು ಸ್ಫೋಟಕ ಘಟ್ಟಕ್ಕೆ
ಕಾಂಗ್ರೆಸ್ ಪಕ್ಷದ ಆಂತರಿಕ ಅಸಮಾಧಾನ ಮತ್ತೆ ಒಂದು ಸ್ಫೋಟಕ ಘಟ್ಟಕ್ಕೆ ತಲುಪಿದೆ. ಇದೀಗ ಕಾಂಗ್ರೆಸ್ನ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರು ನೇರವಾಗಿ ತಮ್ಮ ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನದಲ್ಲಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಬ್ಬ ಸ್ವಪಕ್ಷೀಯ ಶಾಸಕರೇ ಅಸಮಾಧಾನ ಹೊರ ಹಾಕಿದ್ದಾರೆ. ಹಿರಿಯ ಶಾಸಕ ಬಿ.ಆರ್.ಪಾಟೀಲ್ ಬೆನ್ನಲ್ಲೇ ರಾಜು ಕಾಗೆ ಹೊಸ ಬಾಂಬ್ ಹಾಕಿದ್ದಾರೆ. ಬಿ.ಆರ್. ಪಾಟೀಲ್ ಹೇಳಿದಂತೆ ಅದರ ಅಪ್ಪನ ಹಾಗೆ ನನ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿ.ಆರ್. ಪಾಟೀಲ್ ಹೇಳಿದ್ದು ಸುಳ್ಳಲ್ಲ, ನಿಜಾನೆ ಇದೆ. ಬಿ.ಆರ್. ಪಾಟೀಲ್ ಹೇಳಿಕೆಗೆ ಇದೀಗ ಶಾಸಕ ರಾಜು ಕಾಗೆ ಸಾಥ್ ನೀಡಿದಂತಾಗಿದೆ. ನಮ್ಮ ಸರ್ಕಾರದಲ್ಲಿ ಅಧಿಕಾರಿಗಳ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಅವರ ವಿಶೇಷ ಅನುದಾನ ಬಂದಿದೆ. ₹25 ಕೋಟಿ ಅನುದಾನ ಕೊಟ್ಟಿದ್ದಾರೆ ಎರಡು ವರ್ಷ ಆದರೂ ಇದುವರೆಗೆ ವರ್ಕ್ ಆರ್ಡರ್ ಕೊಟ್ಟಿಲ್ಲ. ನಮ್ಮ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾದಗಿದೆ. ಇದರಿಂದ ಮನಸ್ಸು ಸಾಕಷ್ಟು ನೋವಾಗಿದೆ. ನಾನು ಸಹ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಹಿರಿಯ ಶಾಸಕ ಬಿ.ಆರ್. ಪಾಟೀಲ್ ಹೇಳಿದ ಹಾಗೆ ಸರಿಯಾಗೆ ಇದೆ. ಎರಡೆರಡು ವರ್ಷ ಆದ್ರು ವರ್ಕ್ ಆರ್ಡರ್ ನೀಡುತ್ತಿಲ್ಲ ಎಂದರೆ ಅರ್ಥ ಏನು.? ಎರಡು ದಿನದಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಸಿಟಿ ರವಿಯಿಂದ ಪ್ರತಿಕ್ರಿಯೆ:
ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು, 'ರಾಜು ಕಾಗೆ ಬಿಜೆಪಿಯವರಲ್ಲ, ಆದರೆ ಅವರು ಹೇಳಿರೋದು ಸತ್ಯ. ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸವೇ ನಡೆಯುತ್ತಿಲ್ಲ ಎಂಬುದು ಅವರಿಗೆ ತಿಳಿದಿದೆ. ಗ್ಯಾರಂಟಿ ಹೇಳಿದ್ದೇವೆ ಅಂದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ' ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ. 'ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ'. ಇದು ಖಾಸಗಿ ವಿಷಯ ಅಲ್ಲ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.


