ಉತ್ತರ ಪ್ರದೇಶದ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ‘ನೋ ಬ್ಯಾಗ್ ಡೇ’ (ಬ್ಯಾಗ್ ರಹಿತ ದಿನ) ಜಾರಿಗೆ ಬರುವ ದಿನ ದೂರವಿಲ್ಲ. ಇನ್ಮುಂದೆ ತಿಂಗಳಲ್ಲಿ ಒಂದು ದಿನ ಶಾಲಾ ಮಕ್ಕಳಿಗೆ ಭಾರದ ಬ್ಯಾಗ್‌ನಿಂದ ಮುಕ್ತಿ ನೀಡುವ ಯೋಜನೆ ಜಿಲ್ಲೆಯಲ್ಲಿ ಸದ್ಯದಲ್ಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಮಂಗಳೂರು(ಡಿ.10): ಉತ್ತರ ಪ್ರದೇಶದ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ‘ನೋ ಬ್ಯಾಗ್ ಡೇ’ (ಬ್ಯಾಗ್ ರಹಿತ ದಿನ) ಜಾರಿಗೆ ಬರುವ ದಿನ ದೂರವಿಲ್ಲ. ಇನ್ಮುಂದೆ ತಿಂಗಳಲ್ಲಿ ಒಂದು ದಿನ ಶಾಲಾ ಮಕ್ಕಳಿಗೆ ಭಾರದ ಬ್ಯಾಗ್‌ನಿಂದ ಮುಕ್ತಿ ನೀಡುವ ಯೋಜನೆ ಜಿಲ್ಲೆಯಲ್ಲಿ ಸದ್ಯದಲ್ಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ರೋಶನಿ ನಿಲಯದಲ್ಲಿ ಶನಿವಾರ ನಡೆದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮತ್ತು ಶಾಸಕ ಲೋಬೋ ಅವರೊಂದಿಗಿನ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಈ ಸಂಬಂಧ ನಿರ್ಣಯವೊಂದನ್ನೂ ಕೈಗೊಳ್ಳಲಾಗಿದೆ. ಡಿಡಿಪಿಐ ಶಿವರಾಮಯ್ಯ ಸಮಾರಂಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದಾಗ, ಮಕ್ಕಳು ಖುಷಿಯಿಂದಲೇ ಅನುಮೋದನೆ ನೀಡಿದರು.

ಹೀಗಾಗಿ ಜಿಲ್ಲೆಯಲ್ಲಿ ತಿಂಗಳ ಒಂದು ದಿನವನ್ನು ಬ್ಯಾಗ್ ರಹಿತ ದಿನವನ್ನಾಗಿ ಪ್ರಾಯೋಗಿಕವಾಗಿ ಜಾರಿಗೆ ತರುವ ಇರಾದೆಯನ್ನು ಜಿಲ್ಲಾ ಶಿಕ್ಷಣ ಇಲಾಖೆ ಹೊರಗೆಡವಿದೆ.

ಶಾಲೆಯಲ್ಲಿ ಶಿಕ್ಷೆ ಬೇಕು!: ಇದೇ ವೇಳೆ ವಿದ್ಯಾರ್ಥಿನಿಯೊಬ್ಬಳು,ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಶಿಕ್ಷಿಸುತ್ತಿಲ್ಲ. ಹೀಗಾಗಿ, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಹಿಂದಿನಂತೆ ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಿಸುವ ಅಧಿಕಾರ ನೀಡಬೇಕು. ಇಂತಹ ನಿಯಮವನ್ನು ಮರು ಜಾರಿ ಮಾಡಬೇಕೆಂದು ಸಚಿವರಿಗೆ ಆಗ್ರಹಿಸಿದರು.

ಇದಕ್ಕೆ ಎಲ್ಲ ಮಕ್ಕಳು ಕರತಾಡನದ ಮೂಲಕ ಬೆಂಬಲ ವ್ಯಕ್ತ ಪಡಿಸಿದರು. ಇದರಿಂದ ಅಚ್ಚರಿಗೊಂಡ ಸಚಿವ ಯು.ಟಿ.ಖಾದರ್, ಮಕ್ಕಳಿಂದಲೇ ಇಂತಹ ಬೇಡಿಕೆ ಬರುವುದು ಅಪರೂಪ. ಮಕ್ಕಳೆಲ್ಲರೂ ಸಹಿ ಮಾಡಿಕೊಡಿ, ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದರು.