ವೇಶ್ಯಾಗೃಹದ ಗಿರಾಕಿಗೆ ಶಿಕ್ಷೆ ಸಲ್ಲದು: ಕರ್ನಾಟಕ ಹೈಕೋರ್ಟ್
ವೇಶ್ಯಾಗೃಹಕ್ಕೆ ತೆರಳುವ ಗಿರಾಕಿಗೆ ಶಿಕ್ಷೆ ಕೊಡುವ ಅಗತ್ಯ ಇಲ್ಲ ಎಂದು ಕರ್ನಾಟಕ ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ. ಕರ್ನಾಟಕ ಹೈ ಕೋರ್ಟ್ ನೀಡಿರುವ ಈ ತೀರ್ಮಾನ ಸಹಜವಾಗಿಯೇ ಅನೇಕ ಪ್ರಶ್ನೆಗಳನ್ನು ಎತ್ತಿದೆ.
ಬೆಂಗಳೂರು[ಮೇ. 19] ಲೈಂಗಿಕ ಬಯಕೆ ತೀರಿಸಿಕೊಳ್ಳಲು ವೇಶ್ಯಾಗೃಹಕ್ಕೆ ಹೋದವನಿಗೆ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಕರ್ನಾಟಕ ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಗಿರಾಕಿಗಳಿಗೆ ಶಿಕ್ಷೆ ನೀಡುವ ಅವಕಾಶವಿಲ್ಲ. ವೇಶ್ಯಾಗೃಹ ನಡೆಸುವವರು ಮತ್ತು ಅದಕ್ಕೆ ಪೂರಕವಾಗಿ ಕೆಲಸ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸಬಹುದು ಎಂದು ಹೇಳಿದೆ.
ಏನಿದು ಪ್ರಕರಣ: ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು 2015ರಲ್ಲಿ ವೇಶ್ಯಾಗೃಹವೊಂದರ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ವೇಶ್ಯಾಗೃಹ ನಡೆಸುವವರು ಮತ್ತು ಅಲ್ಲಿದ್ದ ಗಿರಾಕಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಐಪಿಸಿ 370 ,ಮಾನವ ಕಳ್ಳಸಾಗಣೆ ತಡೆ ಕಾಯ್ದೆ 3,4,5 ಮತ್ತು 7 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ಆದರೆ ಆರೋಪಿ ಸ್ಥಾನದಲ್ಲಿದ್ದ ಗಿರಾಕಿಯೊಬ್ಬ ಈ ಪ್ರಕರಣದ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ಏಕಸದಸ್ಯ ಪೀಠ ಇದೀಗ ಆದೇಶ ನೀಡಿದೆ. ಆರೋಪಿ ತಾನು ಹೋಗಿ ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡಿದಂತಾದರೂ ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆರೋಪಿ ಸಲ್ಲಿಸಿದ ಮನವಿ ಪುರಸ್ಕರಿಸಿರುವ ನ್ಯಾಯಾಲಯ ಅವರ ಮೇಲಿದ್ದ ಪ್ರಕರಣ ವಜಾ ಮಾಡಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.