ಭಾರೀ ಬ್ಯುಸಿ, ವಿಚಾರಣೆಗೆ ಬರಲಾಗಲ್ಲ!
ಪಿಎನ್ಬಿಗೆ 11400 ಕೋಟಿ ರು.ವಂಚಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ಗೆ, ಉದ್ಯಮಿ ನೀರವ್ ಮೋದಿ, ಮತ್ತೊಬ್ಬ ಪರಾರಿ ವೀರ ವಿಜಯ್ ಮಲ್ಯ ರೀತಿಯಲ್ಲೇ ಸಡ್ಡು ಹೊಡೆಯುವ ಉತ್ತರ ನೀಡಿದ್ದಾರೆ.
ನವದೆಹಲಿ: ಪಿಎನ್ಬಿಗೆ 11400 ಕೋಟಿ ರು.ವಂಚಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ಗೆ, ಉದ್ಯಮಿ ನೀರವ್ ಮೋದಿ, ಮತ್ತೊಬ್ಬ ಪರಾರಿ ವೀರ ವಿಜಯ್ ಮಲ್ಯ ರೀತಿಯಲ್ಲೇ ಸಡ್ಡು ಹೊಡೆಯುವ ಉತ್ತರ ನೀಡಿದ್ದಾರೆ. ನಾನೀಗ ವಿದೇಶದಲ್ಲಿ ಉದ್ಯಮ ಸಂಬಂಧಿ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕಾರಣ ತಕ್ಷಣಕ್ಕೆ ಭಾರತಕ್ಕೆ ಮರಳಲಾಗದು ಎಂದು ಮಾಹಿತಿ ರವಾನಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಕೆಲ ದಿನಗಳ ಹಿಂದೆ ನೀರವ್ಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಇದಕ್ಕೆ ಇ ಮೇಲ್ನಲ್ಲೇ ಉತ್ತರ ನೀಡಿರುವ ನೀಮೋ, ಈಗಾಗಲೇ ವಿಚಾರಣೆ ಹೆಸರಲ್ಲಿ ನನ್ನ ಪಾಸ್ಪೋರ್ಟ್ ಅನ್ನು ತಾತ್ಕಲಿಕವಾಗಿ ಅಮಾನತು ಮಾಡಲಾಗಿದೆ.
ಇದಲ್ಲದೆ ನಾನೀಗ ವಿದೇಶದಲ್ಲಿ ಉದ್ಯಮ ಸಂಬಧಿ ಕೆಲಸಗಳಲ್ಲಿ ಬ್ಯುಸಿ ಆಗಿದ್ದೇನೆ. ಹೀಗಾಗಿ ವಿಚಾರಣೆಗೆ ಹಾಜರಾಗಲಾಗದು ಎಂದು ಮಾಹಿತಿ ನೀಡಿದ್ದಾರೆ. ಈ ಹಿಂದೆ 9000 ಕೋಟಿ ರು. ವಂಚನೆ ಕೇಸಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೀಡಿದ್ದ ನೋಟಿಸ್ಗೂ ವಿಜಯ ಮಲ್ಯ ಇದೇ ರೀತಿಯ ಉತ್ತರ ನೀಡಿದ್ದರು.