ಪರಾರಿಯಾದ ನೀರವ್ ಹುಡುಕಿಕೊಡಿ ಎಂದ ಸಿಬಿಐ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11400 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಚಿನ್ನಾಭರಣ ಉದ್ಯಮಿ ನೀರವ್ ಮೋದಿ ಮತ್ತು ಅವರ ಕುಟುಂಬ ಸದಸ್ಯರನ್ನು ಹುಡುಕಿಕೊಡಿ ಎಂದು ಸಿಬಿಐ, ಇಂಟರ್ಪೋಲ್ಗೆ ಮನವಿ ಮಾಡಿದೆ.
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11400 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಚಿನ್ನಾಭರಣ ಉದ್ಯಮಿ ನೀರವ್ ಮೋದಿ ಮತ್ತು ಅವರ ಕುಟುಂಬ ಸದಸ್ಯರನ್ನು ಹುಡುಕಿಕೊಡಿ ಎಂದು ಸಿಬಿಐ, ಇಂಟರ್ಪೋಲ್ಗೆ ಮನವಿ ಮಾಡಿದೆ.
ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ತನಿಖೆಗೆ ಬೇಕಾದ ವ್ಯಕ್ತಿ ಪರಾರಿಯಾದಾಗ, ಆತನನ್ನು ಹುಡುಕಿಕೊಡಲು ಇಲ್ಲವೆಬಂಧಿಸಲು ಅನುವಾಗುವಂತೆ ಡಿಫ್ಯೂಷನ್ ನೋಟಿಸ್ ಜಾರಿ ಮಾಡಲಾಗುತ್ತದೆ. ಸದ್ಯ ಪಿಎನ್ಬಿಗೆ 280 ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ಅದರ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದೆ.
ಹೊಸ ಎಫ್ಐಆರ್: ಈ ನಡುವೆ ಪಿಎನ್ ಬಿಗೆ 4882 ಕೋಟಿ . ವಂಚಿಸಿದ ಪ್ರಕರಣದಲ್ಲಿ ನೀರವ್ ಮೋದಿ ಮಾವ, ಗೀತಾಂಜಲಿ ಆಭರಣ ಕಂಪನಿಯ ಮೆಹುಲ್ ವಿರುದ್ಧ ಸಿಬಿಐ ಹೊಸ ಎಫ್ಐಆರ್ ದಾಖಲಿಸಿದೆ.
ಇಡಿ ಸಮನ್ಸ್ ಜಾರಿ: ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರವೂ, ನೀರವ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮುಂದಿನ ಒಂದು ವಾರದಲ್ಲಿ ತನ್ನ ಮುಂದೆ ಹಾಜರಾಗುವಂತೆ ನೀರವ್ ಮತ್ತು ಚೋಕ್ಸಿಗೆ ಇಡಿ ಸಮನ್ ಜಾರಿ ಮಾಡಿದೆ.
ಪಾಸ್ಪೋರ್ಟ್ ಅಮಾನತು: ಈ ನಡುವೆ ಇಡಿ ಮನವಿ ಮೇರೆಗೆ ನೀರವ್ ಮತ್ತು ಚೋಕ್ಸಿಯ ಪಾಸ್ಪೋರ್ಟ್ ಅನ್ನು ವಿದೇಶಾಂಗ ಸಚಿವಾಲಯ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಜೊತೆಗೆ ನಿಮ್ಮ ಪಾಸ್ಪೋರ್ಟ್ ಏಕೆ ರದ್ದು ಮಾಡಬಾರದು ಎಂದು ಇಬ್ಬರಿಗೂ ಪ್ರಶ್ನಿಸಿದ್ದು, ಇದಕ್ಕೆ ಒಂದು ವಾರದಲ್ಲಿ ಉತ್ತರಿಸದಿದ್ದಲ್ಲಿ ಪಾಸ್ಪೋರ್ಟ್ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದೆ.