ಡಿಕೆ ಸಾಹೇಬ್ರು ಚಿಲ್ರೆ ರಾಜಕೀಯ ಮಾಡಲ್ಲ
ಸಚಿವ ಸ್ಥಾನ ಎಂಬುದು ಹಣೆಬರಹದಲ್ಲಿ ಬರೆದಿರಬೇಕು. ಸಚಿವ ಸ್ಥಾನ ಸಿಗುವ ಬಗ್ಗೆ ಬರೆದಿದ್ದರೆ ನನಗೆ ಸಿಗುತ್ತದೆ. ಅದಕ್ಕಾಗಿ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವುದಿಲ್ಲ
ಬೆಂಗಳೂರು(ಸೆ.19): ಡಿಕೆಶಿ ಸಾಹೇಬರು ಚಿಲ್ಲರೆ ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಘನತೆಯಿಂದ ರಾಜಕಾರಣ ಮಾಡುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥಿಸಿ ಕೊಂಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಕೆ ಸಾಹೇಬರು ಚಿಲ್ಲರೆ ರಾಜಕಾರಣ ಮಾಡುವಂತಹ ವ್ಯಕ್ತಿಯಲ್ಲ. ಅವರೇ ಆದ ಉತ್ತಮ ವ್ಯಕ್ತಿತ್ವವನ್ನು ರಾಜಕಾರಣದಲ್ಲಿ ಹೊಂದಿದ್ದಾರೆ. ತಮ್ಮದೇ ಘನತೆಯಿಂದ ರಾಜಕಾರಣ ಮಾಡುತ್ತಿದ್ದು, ಅವರು ನಮ್ಮ ಪಕ್ಷದ ನಾಯಕರಾಗಿದ್ದಾರೆ ಎಂದರು. ‘ಸಚಿವ ಸ್ಥಾನ ಎಂಬುದು ಹಣೆಬರಹದಲ್ಲಿ ಬರೆದಿರಬೇಕು. ಸಚಿವ ಸ್ಥಾನ ಸಿಗುವ ಬಗ್ಗೆ ಬರೆದಿದ್ದರೆ ನನಗೆ ಸಿಗುತ್ತದೆ. ಅದಕ್ಕಾಗಿ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವುದಿಲ್ಲ’ ಎಂದು ಪರೋಕ್ಷವಾಗಿ ಜಾರಕಿಹೊಳಿ ಸಹೋದರರಿಗೆ ಟಾಂಗ್ ಕೊಟ್ಟರು.
ಬಿಜೆಪಿಯಿಂದ ಯಾರೂ ಸಂಪರ್ಕಿಸಿಲ್ಲ
ವಿಜಯಪುರ: ನನ್ನನ್ನು ರಾಜಕೀಯವಾಗಿ ಬೆಳೆಸಿದ್ದೇ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ. ಕುಮಾರಣ್ಣನ ಆಶೀರ್ವಾದದಿಂದಾಗಿ ಶಾಸಕನಾಗಿದ್ದೇನೆ. ಅವರಿಗೆ ದ್ರೋಹ ಬಗೆಯುವುದಿಲ್ಲ ಎಂದು ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚೌಹಾಣ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ಈಗ ಯಾವುದೇ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನನಗೆ ಯಾರೂ ಗಾಳ ಹಾಕಿಲ್ಲ. ನಾನು ಎಂದಿಗೂ ಜೆಡಿಎಸ್ ಬಿಡುವುದಿಲ್ಲ. ಗೌಡರಿಗೆ ದ್ರೋಹ ಬಗೆಯುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.