ನರಭಕ್ಷಕ ಭಾರತೀಯ; ಸ್ನೇಹಿತನ ಹತ್ಯೆಗೈದು ಮಾಂಸ ತಿಂದ 8ನೇ ತರಗತಿ ಬಾಲಕ
ಶಿಕ್ಷಕರ ಬಗ್ಗೆ ತನಗೆ ಕೋಪ ಇದ್ದಿದ್ದರಿಂದ ಶಾಲೆಗೆ ಕೆಟ್ಟಹೆಸರು ತರಲು ದೀಪುವಿನ ಹೃದಯವನ್ನು ಶಾಲೆಯ ಬಳಿಯ ಟ್ಯಾಂಕ್'ನಲ್ಲಿ ಎಸೆದಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.
ಲೂಧಿಯಾನ: 16 ವರ್ಷದ ಬಾಲಕನೊಬ್ಬ 9 ವರ್ಷದ ತನ್ನ ಸ್ನೇಹಿತನನ್ನು ಹತ್ಯೆಗೈದ ಬಳಿಕ ಆತನ ರಕ್ತ ಕುಡಿದು, ಮಾಂಸ ತಿಂದ ಭೀಕರ ಘಟನೆಯೊಂದು ಇಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಸೋಮವಾರ ದೀಪು ಎಂಬ ಬಾಲಕ ನಿಗೂಢವಾಗಿ ನಾಪತ್ತೆಯಾಗಿದ್ದ. ಮಾರನೇ ದಿನ ಆತನ ಶವ ಛಿದ್ರವಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದೇಹವನ್ನು 6 ತುಂಡುಗಳಾಗಿ ಕತ್ತರಿಸಿದ್ದೂ ಕಂಡುಬಂದಿತ್ತು. ಆರಂಭದಲ್ಲಿ ಸಾಕಷ್ಟುತನಿಖೆ ನಡೆಸಿದರೂ, ಪೊಲೀಸರಿಗೆ ಪ್ರಕರಣದ ಕುರಿತು ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಸಾವನ್ನಪ್ಪಿದ ದೀಪುವಿನ ಮನೆಯ ಸಮೀಪದ ಸಿಸಿಟೀವಿ ದೃಶ್ಯವೊಂದನ್ನು ಪರಿಶೀಲಿಸಿದಾಗ, ಆತ ಕಡೆಯ ಬಾರಿಗೆ ಸ್ನೇಹಿತನ ಜೊತೆ ತೆರಳಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಈ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿ ಹೇಳಿದ್ದೇನು?: ಕಳೆದ ಸೋಮವಾರ ಹತನಾದ ಬಾಲಕ ದೀಪುವಿಗೆ ಗಾಳಿಪಟದ ಆಸೆ ತೋರಿಸಿದ್ದ ಆರೋಪಿ, ಆತನನ್ನು ತನ್ನ ಜೊತೆಗೆ ಕರೆದೊಯ್ದಿದ್ದ. ಬಳಿಕ ನಿರ್ಜನ ಪ್ರದೇಶವೊಂದರಲ್ಲಿ ದೀಪುವಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ನಂತರ ಆತನ ದೇಹವನ್ನು 6 ಭಾಗಗಳಾಗಿ ಕತ್ತರಿಸಿ, ಹೃದಯದ ಭಾಗವನ್ನು ತಾನು ಓದುತ್ತಿದ್ದ ಶಾಲೆಯ ಬಳಿ ಎಸೆದಿದ್ದ. ಜೊತೆಗೆ ದೇಹ ಕತ್ತರಿಸುವಾಗ ಬಂದ ರಕ್ತವನ್ನು ಕುಡಿದಿದ್ದೇ ಅಲ್ಲದೇ, ದೀಪುವಿನ ದೇಹದ ಹಸಿ ಮಾಂಸವನ್ನೇ ತಿಂದಿದ್ದ. ನಂತರ ದೇಹವನ್ನು ಬ್ಯಾಗ್ನಲ್ಲಿ ತುಂಬಿ ಮೈದಾನದ ಸಮೀಪ ಎಸೆದು ಬಂದಿದ್ದ. ಬಳಿಕ ಎಂದಿನಂತೆ ಮನೆಗೆ ಬಂದಿದ್ದ ಆರೋಪಿ, ತನ್ನ ತಂದೆಗೆ ಅಡುಗೆ ಮಾಡಿ ಬಡಿಸಿದ್ದ.
ವಿಚಾರಣೆ ವೇಳೆ ತನಗೆ ಹಸಿ ಮಾಂಸವನ್ನು ತಿನ್ನುವ ಅಭ್ಯಾಸವಿದೆ. ತಾನು ಆಗಾಗ್ಗೆ ಹಸಿ ಚಿಕನ್ ತಿನ್ನುತ್ತಿದ್ದ. ಕೆಲವೊಮ್ಮೆ ನನ್ನ ಕಾಲಿನ ಭಾಗವನ್ನೇ ಕಿತ್ತುಕೊಂಡು ಹಸಿಯಾಗಿ ತಿಂದಿದ್ದೆ ಎಂದು ಆರೋಪಿ ಬಾಲಕ ಹೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಬಳಿಕ ಮಾನಸಿಕ ತಜ್ಞರ ಬಳಿಯೋ ಕರೆದೊಯ್ದಿದ್ದಾರೆ. ಆದರೆ ಹತ್ಯೆಗೆ ನಿಜ ಕಾರಣ ಏನು ಎಂಬುದು ಬಹಿರಂಗವಾಗಿಲ್ಲ. ಶಿಕ್ಷಕರ ಬಗ್ಗೆ ತನಗೆ ಕೋಪ ಇದ್ದಿದ್ದರಿಂದ ಶಾಲೆಗೆ ಕೆಟ್ಟಹೆಸರು ತರಲು ದೀಪುವಿನ ಹೃದಯವನ್ನು ಶಾಲೆಯ ಬಳಿಯ ಟ್ಯಾಂಕ್'ನಲ್ಲಿ ಎಸೆದಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.
epaper.kannadaprabha.in