ವಿವಾದಿತ ಟ್ವೀಟ್: ಮಜುಂದಾರ್ ಶಾ ಕೊಟ್ಟ ಸ್ಪಷ್ಟನೆ ಏನು?
ಕನ್ನಡ ಸಂಘಟನೆ, ಶಿಕ್ಷಣ ತಜ್ಞರು ಮತ್ತು ಮಾಧ್ಯಮಗಳ ಕುರಿತಾಗಿ ಟ್ವೀಟ್ ಮಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಉದ್ಯಮಿ ಕಿರಣ್ ಮಜುಂದಾರ್ ಶಾ ಮತ್ತೊಂದು ಟ್ವೀಟ್ ಮಾಡಿದ್ದು ಸ್ಪಷ್ಟನೆ ನೀಡುವ ಯತ್ನ ಮಾಡಿದ್ದಾರೆ.
ಬೆಂಗಳೂರು[ಜು.9] ಕನ್ನಡಕ್ಕೆ ಸಂಬಂಧಿಸಿ ನಾನು ಮಾಡಿದ್ದ ಟ್ವೀಟ್ ನ್ನು ಕೆಲ ರಾಜಕಾರಣದ ದುಷ್ಟ ಶಕ್ತಿಗಳು ತಮಗೆ ಬೇಕಾದಂತೆ ಬಳಕೆ ಮಾಡಿಕೊಳ್ಳಲು ಯತ್ನ ಮಾಡುತ್ತಿವೆ. ಅವಕಾಶಗಳು ತೆರೆದುಕೊಳ್ಳಲು ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಎರಡನ್ನು ಕಲಿಯಬೇಕು ಎಂದು ಹೇಳಿದ್ದೆ. ಕರ್ನಾಟಕದ ಯುವಕರ ಏಳಿಗೆ ಗಮನದಲ್ಲಿ ಇಟ್ಟುಕೊಂಡೇ ಹೀಗೆ ಹೇಳಿದ್ದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದು ಇದನ್ನೆ. ದಯವಿಟ್ಟು ನನ್ನ ಹೇಳಿಕೆ ತಿರುಚಬೇಡಿ.. ಎಂದು ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದಾರೆ.
ಮತ್ತೊಮ್ಮೆ ಕನ್ನಡಿಗರ ಭಾವನೆ ಕೆರಳಿಸಿದ ಕಿರಣ್ ಮಜುಂದಾರ್ ಶಾ
ಕನ್ನಡ ಸಂಘಟನೆಗಳನ್ನುಅತ್ಯಲ್ಪ ಎಂದು ಕರೆದು ಮಾಧ್ಯಮಗಳು ಅವಕ್ಕೆ ಪುಕ್ಕಟೆ ಪ್ರಚಾರ ನೀಡುತ್ತಿವೆ ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಕಿರಣ್ ಮಜೂಂದಾರ್ ಶಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಿಗರ ಭಾವನೆ ಕೆರಳಿಸಿದ್ದ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಅಲ್ಲದೇ ಮಾಧ್ಯಮಗಳು ಕಿರಣ್ ಮಾತನ್ನು ಖಂಡಿಸಿದ್ದವು.ಇದೆಲ್ಲವನ್ನು ನೋಡಿದ ಶಾ ತಾನು ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ನೀಡುವುದರೊಂದಿಗೆ ವಿವಾದಕ್ಕೆ ತೇಪೆ ಹಾಕುವ ಕೆಲಸ ಮಾಡಲು ಮುಂದಾಗಿರುವುದು ಸ್ಪಷ್ಟ.