ಗರಂ ಆದ ಗೌಡರು : ಕಾಂಗ್ರೆಸ್’ಗೆ ಬಿಗ್ ಶಾಕ್..?
ತಮ್ಮ ವಿರೋಧಿ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದು ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಬಿಟ್ಟುಕೊಡದಿರಲು ಕಾಂಗ್ರೆಸ್ ನಿರ್ಧರಿಸಿದ್ದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಸಿಟ್ಟಾಗಿಸಿದಂತಿದೆ.
ನವದೆಹಲಿ: ತಮ್ಮ ವಿರೋಧಿ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದು ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಬಿಟ್ಟುಕೊಡದಿರಲು ಕಾಂಗ್ರೆಸ್ ನಿರ್ಧರಿಸಿದ್ದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಸಿಟ್ಟಾಗಿಸಿದಂತಿದೆ. ಬಿಬಿಎಂಪಿ ಸೇರಿ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಕಡಿತ ಗೊಳಿಸುವ ಮುನ್ಸೂಚನೆ ನೀಡಿರುವ ಅವರು, ಈ ನಿಟ್ಟಿನಲ್ಲಿ ಬುಧವಾರ ಜೆಡಿಎಸ್ ಸಭೆ ಕರೆದಿದ್ದಾರೆ.
ರಾಜ್ಯಸಭೆ ಮೂರನೇ ಅಭ್ಯರ್ಥಿ ವಿಚಾರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಬಿಎಂಪಿಯಲ್ಲಿ ಕಾಂಗ್ರೆಸ್ಸಿಗೆ ನೀಡಿರುವ ಬೆಂಬಲ ವಾಪಸ್ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ. ರಾಜ್ಯಸಭೆಗೆ 3ನೇ ಅಭ್ಯರ್ಥಿ ಯಾಗಿ ಚೆನ್ನಾರೆಡ್ಡಿಯನ್ನು ನಿಲ್ಲಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಈಗ ನಾನು ಅವರ ಬಳಿ ಹೋಗಿ ತಲೆ ತಗ್ಗಿಸಿ ನಿಲ್ಲಬೇಕೇ? ಕಾಂಗ್ರೆಸ್ನವರು ಹಿಂದೆಯೂ, ಈಗಲೂ ನನ್ನ ಬೆನ್ನಿಗೆ ಇರಿದಿದ್ದಾರೆ ಎಂದು ಗುಡುಗಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದೆವು. ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ಗೆ ನೆರವು ನೀಡಿದ್ದೆವು. ಒಂದು ವೇಳೆ ನಂಜನಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಿದ್ದರೆ ಫಲಿತಾಂಶವೇ ಬೇರೆ ಆಗುತ್ತಿತ್ತು. ಇದೀಗ ನಾವು ಕಾಂಗ್ರೆಸ್ಗೆ ನೀಡಿದ್ದ ಸೀಮಿತ ಬೆಂಬಲ ಮರುಪರಿಶೀಲಿಸುವ ಸಮಯ ಬಂದಿದೆ ಎಂದು ದೇವೇಗೌಡರು ಹೇಳಿದರು.
ಬುಧವಾರ ನಾನು ಪಕ್ಷದ ಪ್ರಮುಖ ನಾಯಕರ ಸಭೆಯನ್ನು ಕರೆದಿದ್ದೇನೆ. ಅಲ್ಲಿ ಕಾಂಗ್ರೆಸ್ಗೆ ವಿವಿಧ ನಗರಪಾಲಿಕೆಗಳಲ್ಲಿ ಜೆಡಿಎಸ್ ನೀಡಿರುವ ಬೆಂಬಲದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.