ಉಪಚುನಾವಣೆ: ರಾಜಕೀಯ ಶಕ್ತಿ ಕೇಂದ್ರವಾದ ಆದಿಚುಂಚನಗಿರಿ ಮಠ
ಇಂದು ಅಮವಾಸ್ಯೆ ದಿನದಂದು ಮಂಡ್ಯದ ನಾಗಮಂಲದಲ್ಲಿರುವ ಆದಿಚುಂಚನಗಿರಿ ಮಠ ಅಕ್ಷರಶಃ ರಾಜಕೀಯ ಶಕ್ತಿ ಕೇಂದ್ರವಾಗಿದೆ.
ಮಂಡ್ಯ, [ಅ.09]: ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದ ನಾಗಮಂಲದಲ್ಲಿರುವ ಆದಿಚುಂಚನಗಿರಿ ಮಠ ಇಂದು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ಇಂದು ಅಮವಾಸ್ಯೆ ನೆಪದಲ್ಲಿ ಮಂಡ್ಯ ಲೋಕಸಭಾ ಜೆಡಿಎಸ್ ಟಿಕೆಟ್ ಗಾಗಿ ಆಕಾಂಕ್ಷಿಗಳು ಆದಿಚುಂಚನಗಿರಿ ಮಠದ ನಿರ್ಮಲಾನಂದಶ್ರೀಗಳ ಮೊರೆ ಹೋಗಿದ್ದಾರೆ.
ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್ ಯಾರಿಗೆ..?
ಮಂಡ್ಯ ಲೋಕಸಭಾ ಜೆಡಿಎಸ್ ಟಿಕೆಟ್ ಗಾಗಿ ಆಕಾಂಕ್ಷಿಗಳಾದ ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಅವರು ಮಠಕ್ಕೆ ಭೇಟಿ ನೀಡಿ ಕಾಲಭೈರವನ ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡರು.
ಪೂಜೆ ಬಳಿಕ ಮೊದಲಿಗೆ ಲಕ್ಷ್ಮಿ ಅಶ್ವಿನ್ ಗೌಡ ಅವರು ನಿರ್ಮಲಾನಂದಶ್ರೀಗಳನ್ನ ಭೇಟಿ ಮಾಡಿದ್ದು, ಟಿಕೆಟ್ ಕೊಡಿಸುವಂತೆ ಶ್ರೀಗಳ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿದ್ದಾರೆ.
ಈ ಹಿಂದೆ ಸಚಿವ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ವೇಳೆಯೂ ಸಹ ಸಚಿವ ಸ್ಥಾನದ ಆಕಾಂಕ್ಷಿಗಳು ನಿರ್ಮಲಾನಂದಶ್ರೀಗಳ ಮೊರೆ ಹೋಗಿದ್ದರು.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಸಹ ಶ್ರೀಗಳ ಮಾತಿಗೆ ವಿರುದ್ಧದ ಕಾರ್ಯಗಳನ್ನು ಮಾಡಿಲ್ಲ. ಒಂದು ರೀತಿಯಲ್ಲಿ ಶ್ರೀಗಳು ಜೆಡಿಎಸ್ ಹೈಕಮಾಂಡ್ ಎನ್ನಬಹುದು.