ಏನೆಲ್ಲ ಮಾಡಿದ್ರೂ ಕೂಡ ನೀನು ನನ್ನ ಹತ್ತಿರ ಬಾ...ನೀ ಬಾ...ಅಂತಾ ದೆವ್ವ ತನ್ನನ್ನು ಬಿಟ್ಟೂ ಬಿಡದೇ ಕರೆಯುತ್ತಿದೆ ಎನ್ನುತ್ತಿದ್ದ

ಚಿಕ್ಕೋಡಿ(ಅ.23): ಆತ ಅಪಾರ ದೈವೀ ಭಕ್ತ, ದಿನದ 24 ಗಂಟೆಗಳ ಕಾಲವೂ ಕೂಡ ಪೂಜೆ-ಪುನಸ್ಕಾರದಲ್ಲಿಯೇ ಕಾಲ ಕಳೆಯೋ ವ್ಯಕ್ತಿ. ದೆವ್ವದ ಕಾಟದಿಂದ ತಪ್ಪಿಸಿಕೊಳ್ಳೋದಕ್ಕಾಗಿಯೇ ಮನೆಯ ಮುಂದೆ ಆಂಜನೇಯ ದೇವಸ್ಥಾನವನ್ನೂ ಕೂಡ ನಿರ್ಮಿಸಿಕೊಂಡು ಪೂಜಿಸುತ್ತಿದ್ದ. ಆದರೂ ಕೂಡ ದೆವ್ವ ತನ್ನನ್ನು ಬೆಂಬಿಡದೇ ಕರೀತಾ ಇದೆ ಅಂತಾ ಆತ ಬಾರದ ಲೋಕಕ್ಕೆ ಹೋಗಿದ್ದಾನೆ. ಮನೆ ಬೆಳಗುವ ಮಗನನ್ನು ಕಳೆದುಕೊಂಡು ಆತನ ನೆನಪಲ್ಲಿಯೇ ದೀಪ ಹಚ್ಚಿಕೊಂಡು ದುಃಖದ ಮಡುವಿನಲ್ಲಿ ಸಂಕಷ್ಟ ಪಡುತ್ತಿದೆ ಆತನ ಕುಟುಂಬ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಡೆದಿದ್ದಾದರೂ ಏನು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಹಟ್ಟಿ ಗ್ರಾಮದಲ್ಲಿ ಧರೆಪ್ಪ ನಾಯಕ (38) ಕಳೆದ ಕೆಲವು ದಿನಗಳ ಹಿಂದೆ ಬೈಕ್ ಮೇಲಿನಿಂದ ಬಿದ್ದು ಗಾಯಗೊಂಡಾಗ ಈತನಲ್ಲಿ ಭೂತ ಸೇರಿಕೊಂಡಿದೆ ಎಂದು ಆತ ಆಗಾಗ ತಾನೇ ಗೊಣಗಿಕೊಳ್ಳುತ್ತಿದ್ದನಂತೆ. ಹೀಗಾಗಿ ತನ್ನ ಬಳಿ ಭೂತವೇ ಸುಳಿದಾಡಬಾರದು ಅಂತಾ ಮನೆಯ ಆವರಣದಲ್ಲಿಯೇ ಕೆಲವು ದಿನಗಳ ಹಿಂದೆ ಆಂಜನೇಯ ದೇವಸ್ಥಾನ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದನಂತೆ. ಏನೆಲ್ಲ ಮಾಡಿದ್ರೂ ಕೂಡ ನೀನು ನನ್ನ ಹತ್ತಿರ ಬಾ...ನೀ ಬಾ...ಅಂತಾ ದೆವ್ವ ತನ್ನನ್ನು ಬಿಟ್ಟೂ ಬಿಡದೇ ಕರೆಯುತ್ತಿರೋ ಕಾರಣದಿಂದ ತನ್ನದೇ ಆದ ಪರವಾನಗಿ ಹೊಂದಿದ ಪಿಸ್ತೂಲ್'ನಿಂದ ಹಣೆಗೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿದ್ದಾನೆ.

ಮಡಿವಂತಿಕೆ ಮನುಷ್ಯ

ಧರೆಪ್ಪ ನಾಯಕ ತುಂಬಾ ಮಡಿವಂತಿಕೆ ಹೊಂದಿದ್ದನಂತೆ. ಯಾರಾದ್ರೂ ಮನೆಗೆ ಬಂದ್ರೂ ಕೂಡ ಮೈಲಿಗೆ ಆಯ್ತು ಅಂತಾ ಮನೆಯನ್ನು ತೊಳೆಯುತ್ತಿದ್ದನಂತೆ. ಸ್ನಾನ ಮಾಡೋವಾಗ ಸೋಪು ಕೈ ಜಾರಿ ನೆಲಕ್ಕೆ ಬಿದ್ದರೂ ಕೂಡ ಆ ಸೋಪನ್ನು ಬಿಟ್ಟು ಬೇರೆ ಸೋಪನ್ನು ಬಳಸುತ್ತಿದ್ದನಂತೆ. ಅಷ್ಟೊಂದು ಮೌಢ್ಯವನ್ನು ಹೊಂದಿದ್ದ ಧರೆಪ್ಪ ತನಗೆ ಯಾರೋ ಕರೆಯುತ್ತಿದ್ದಾರೆ. ಎದೆಯ ಮೇಲೆ ಕುಳಿತುಕೊಂಡು ಯಾರೋ ಹೊಡೆದ ಹಾಗೆ ಆಗುತ್ತಿದೆ. ತನಗೆ ಯಾರೋ ಬಾ...ಬಾ...ಅಂತಾ ಕರೆಯುತ್ತಿದ್ದಾರೆ ಎನ್ನುತ್ತಿದ್ದ ಧರೆಪ್ಪ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಕಾರಣದಿಂದ ಇದೀಗ ಈತನ ಪತ್ನಿ ಹಾಗೂ ಪುತ್ರ ಅನಾಥರಾಗಿದ್ದಾರೆ.

ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನ ಕಳೆದುಕೊಂಡಿರೋ ಧರೆಪ್ಪನ ಪೋಷಕರು ತಮ್ಮದು ಬಂಗಾರದಂತಹ ಬದುಕು ಇತ್ತು. ಆದರೆ ಮಗನ ಅತಿಯಾದ ಮೌಢ್ಯತೆ ಹಾಗೂ ಭಕ್ತಿಯಿಂದ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ ಎನ್ನುತ್ತಿದ್ದಾ

ವರದಿ: ಮುಸ್ತಾಕ್ ಪೀರಜಾದೆ, ಸುವರ್ಣ ನ್ಯೂಸ್