ಪಟಾಕಿ ಹೊಡೆದಿದ್ದಕ್ಕೆ ಕೇಸ್ ದಾಖಲು
ಗಂಭೀರ ಸ್ವರೂಪದ ವಾಯುಮಾಲಿನ್ಯದಿಂದಾಗಿ ಪಟಾಕಿ ಸಿಡಿತ ನಿಷೇಧಕ್ಕೆ ಒಳಪಟ್ಟಿರುವ ದೆಹಲಿಯಲ್ಲಿ, ನಿಷೇಧಿತ ಸ್ವರೂಪದ ಪಟಾಕಿ ಸಿಡಿಸಿದ ಆರೋಪದ ಮೇಲೆ ಓರ್ವ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಲಾಗಿದೆ.
ನವದೆಹಲಿ: ಗಂಭೀರ ಸ್ವರೂಪದ ವಾಯುಮಾಲಿನ್ಯದಿಂದಾಗಿ ಪಟಾಕಿ ಸಿಡಿತ ನಿಷೇಧಕ್ಕೆ ಒಳಪಟ್ಟಿರುವ ದೆಹಲಿಯಲ್ಲಿ, ನಿಷೇಧಿತ ಸ್ವರೂಪದ ಪಟಾಕಿ ಸಿಡಿಸಿದ ಆರೋಪದ ಮೇಲೆ ಓರ್ವ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಲಾಗಿದೆ.
ಪೂರ್ವ ದೆಹಲಿಯಲ್ಲಿ ಶುಕ್ರವಾರ ಸಂಜೆ ದಮನ್ದೀಪ್ ಎಂಬಾತ ಬಿಜ್ಲಿ ಎಂಬ ತೀವ್ರ ಸದ್ದು ಮಾಡುವ ಮತ್ತು ಭಾರೀ ಹಾನಿಕಾರಕ ವಸ್ತುಗಳನ್ನು ಹೊರಸೂಸುವ ಪಟಾಕಿಗಳನ್ನು ಸಿಡಿಸುತ್ತಿದ್ದ. ಈ ಬಗ್ಗೆ ನೆರೆಮನೆಯವರು ಸಾಕಷ್ಟು ಎಚ್ಚರಿಕೆ ನೀಡಿದರೂ ಆತ ಕಿವಿಗೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ದಮನ್ ದೀಪ್ ವಿರುದ್ಧ ಸ್ಥಳೀಯ ನಿವಾಸಿಗಳು ಪೊಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ದಮನ್ದೀಪ್ ಬಳಿ ಇದ್ದ ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಂಡು, ಆತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಭಾರೀ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇವಲ ಹಸಿರು ಪಟಾಕಿ ಮಾತ್ರವೇ ಸಿಡಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಉಳಿದ ಯಾವುದೇ ರೀತಿಯ ಪಟಾಕಿ ಸಿಡಿಸಲು ನಿಷೇಧ ಹೇರಿದೆ.