ಕನ್ನಡದ ಹಾಡು ಹಾಡಿದ 'ಮಹಾ' ಸಚಿವ
ಗಡಿ ವಿಚಾರವಾಗಿ ಮಹಾರಾಷ್ಟ್ರದ ಜನಪ್ರತಿನಿಧಿಗಳು ಕರ್ನಾಟಕದ ವಿರುದ್ಧ ಕೆಂಡಕಾರುತ್ತಿರುವ ನಡುವೆಯೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವರೊಬ್ಬರು ಕನ್ನಡದಲ್ಲಿ ಮಾತನಾಡಿ, ಕನ್ನಡ ಹಾಡು ಹಾಡಿರುವ ವಿದ್ಯಮಾನ ಶನಿವಾರ ನಡೆದಿದೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲರು ಕನ್ನಡದಲ್ಲಿ ಮಾತನಾಡಿ, ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡಿ ಕನ್ನಡ ಪ್ರೇಮ ಮೆರೆದವರು.
ಬೆಳಗಾವಿ (ಜ.21): ಗಡಿ ವಿಚಾರವಾಗಿ ಮಹಾರಾಷ್ಟ್ರದ ಜನಪ್ರತಿನಿಧಿಗಳು ಕರ್ನಾಟಕದ ವಿರುದ್ಧ ಕೆಂಡಕಾರುತ್ತಿರುವ ನಡುವೆಯೇ ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವರೊಬ್ಬರು ಕನ್ನಡದಲ್ಲಿ ಮಾತನಾಡಿ, ಕನ್ನಡ ಹಾಡು ಹಾಡಿರುವ ವಿದ್ಯಮಾನ ಶನಿವಾರ ನಡೆದಿದೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲರು ಕನ್ನಡದಲ್ಲಿ ಮಾತನಾಡಿ, ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡಿ ಕನ್ನಡ ಪ್ರೇಮ ಮೆರೆದವರು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತವಗ ಗ್ರಾಮದಲ್ಲಿ ದುರ್ಗಾದೇವಿ ಮಂದಿರದ ಉದ್ಘಾಟನೆಗೆಂದು ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಜತೆಗೆ ಮಹಾರಾಷ್ಟ್ರದ ಕೊಲ್ಹಾಪುರ ಉಸ್ತುವಾರಿ ಸಚಿವ, ಗಡಿ ಉಸ್ತುವಾರಿಯೂ ಆಗಿರುವ ಚಂದ್ರಕಾಂತ ಪಾಟೀಲರನ್ನು ಆಹ್ವಾನಿಸಲಾಗಿತ್ತು. ಸಚಿವ ಜಾರಕಿಹೊಳಿಯವರ ನಂತರ ಭಾಷಣ ಮಾಡಲು ಆರಂಭಿಸಿದ ಮಹಾರಾಷ್ಟ್ರ ಸಚಿವರು ಕನ್ನಡದಲ್ಲಿಯೇ ಮಾತನಾಡಲು ಆರಂಭಿಸಿದರು. ಇದರಿಂದ ನೆರೆದಿದ್ದ ಜನರೆಲ್ಲರೂ ಕೇಕೆ, ಶಿಳ್ಳೆ ಹೊಡೆಯಲು ಆರಂಭಿಸಿದರು. ಅಷ್ಟೇ ಅಲ್ಲದೆ, ಡಾ.ರಾಜ್ಕುಮಾರ್ ಹಾಡಿ ಅಭಿನಯಿಸಿರುವ ‘ಆಕಸ್ಮಿಕ’ ಚಲನಚಿತ್ರದ ‘ಹುಟ್ಟಿದರೆ ಕನ್ನಡ ನಾಡಿನಲ್ಲೇ ಹುಟ್ಟಬೇಕು’ ಹಾಡನ್ನು ಹಾಡಿ ಎಲ್ಲರನ್ನು ನಿಬ್ಬೆರಗಾಗಿಸಿದರು.