ನಂಜನಗೂಡಿನತ್ತ ಮಹದೇವಪ್ಪ ಕಣ್ಣು : ಸಿಎಂಗೆ ಇಕ್ಕಟ್ಟು
ಹಾಗಾದರೆ ಸಂಕಷ್ಟದ ಸಂದರ್ಭದಲ್ಲಿ ಪಕ್ಷ ಸೇರಿದ ಕಳಲೆ ಕೇಶವಮೂರ್ತಿ ಅವರನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ, ಜೂನ್ ವೇಳೆಗೆ ವಿಧಾನಪರಿಷತ್ ಸ್ಥಾನಗಳು ತೆರವಾಗಲಿದ್ದು, ಆಗ ಅವರನ್ನು ವಿಧಾನಪರಿಷತ್ತಿಗೆ ಪಕ್ಷದಿಂದ ಆಯ್ಕೆ ಮಾಡುವ ಭರವಸೆ ನೀಡಬಹುದು ಎಂಬ ಸಮಜಾಯಿಷಿಯನ್ನು ಮಹದೇವಪ್ಪ ನೀಡುತ್ತಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದ ನಂತರ ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಹಿಂಜರಿಯುತ್ತಿರುವ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ಕಣ್ಣು ಇದೀಗ ನಂಜನಗೂಡು ಕ್ಷೇತ್ರದ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಶವಾಗಿದ್ದ ನಂಜನಗೂಡು ಕ್ಷೇತ್ರದ ಟಿಕೆಟ್ ತಮಗೆ ಕೊಡಬೇಕು ಹಾಗೂ ಟಿ. ನರಸೀಪುರ ಕ್ಷೇತ್ರದ ಟಿಕೆಟ್ ಪುತ್ರ ಸುನೀಲ್ ಬೋಸ್ಗೆ ನೀಡಬೇಕು ಎಂಬುದು ಮಹದೇವಪ್ಪ ಅವರ ಹೊಸ ಪಟ್ಟು. ಇದಕ್ಕೆ ಅವರು ನೀಡುತ್ತಿರುವ ಕಾರಣ- ಉಪ ಚುನಾವಣೆ ವೇಳೆ ಜೆಡಿಎಸ್ನಲ್ಲಿದ್ದ ಕಳಲೆ ಕೇಶವಮೂರ್ತಿ ಅವರು ಪಕ್ಷಕ್ಕೆ ಸೇರಿದರೂ ಅವರ ಇಡೀ ಚುನಾವಣೆಯನ್ನು ನಡೆಸಿದ್ದ ತಾವು (ತಂದೆ ಮಹದೇವಪ್ಪ ಹಾಗೂ ಮಗ ಸುನೀಲ್ ಬೋಸ್ ). ಚುನಾವಣೆಯ ಸಂಪೂರ್ಣ ಹೊಣೆ ಹೊತ್ತು ಕಳಲೆ ಕೇಶವಮೂರ್ತಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ.
ಹಾಗಾದರೆ ಸಂಕಷ್ಟದ ಸಂದರ್ಭದಲ್ಲಿ ಪಕ್ಷ ಸೇರಿದ ಕಳಲೆ ಕೇಶವಮೂರ್ತಿ ಅವರನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ, ಜೂನ್ ವೇಳೆಗೆ ವಿಧಾನಪರಿಷತ್ ಸ್ಥಾನಗಳು ತೆರವಾಗಲಿದ್ದು, ಆಗ ಅವರನ್ನು ವಿಧಾನಪರಿಷತ್ತಿಗೆ ಪಕ್ಷದಿಂದ ಆಯ್ಕೆ ಮಾಡುವ ಭರವಸೆ ನೀಡಬಹುದು ಎಂಬ ಸಮಜಾಯಿಷಿಯನ್ನು ಮಹದೇವಪ್ಪ ನೀಡುತ್ತಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
3 ಪ್ರಬಲ ಕಾರಣ
ಬೆಂಗಳೂರಿನ ಸಿ.ವಿ. ರಾಮನ್ ನಗರದಿಂದ ಸ್ಪರ್ಧಿಸಲು ಮುಂದಾಗಿದ್ದ ಮಹದೇವಪ್ಪ ಹೀಗೆ ಮತ್ತೆ ತಮ್ಮ ಜಿಲ್ಲೆಗೆ ಮರಳಲು ನಿರ್ಧರಿಸಿರುವುದರ ಹಿಂದೆ ಮೂರು ಪ್ರಬಲ ಕಾರಣಗಳು ಇವೆ ಎನ್ನಲಾಗುತ್ತಿದೆ. ಹ್ಯಾರಿಸ್ ಪುತ್ರ ನಳಪಾಡ್ ಪ್ರಕರಣವು ಬೆಂಗಳೂರಿನ ಕೆಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಸಿ.ವಿ. ರಾಮನ್ನಗರದಿಂದ ಸ್ಪರ್ಧಿಸಿದರೆ ಗೆಲ್ಲುವ ನಂಬಿಕೆ ಮೊದಲಿನಷ್ಟುಮಹದೇವಪ್ಪಗೆ ಇಲ್ಲ.
ಇನ್ನೊಂದು ಸಿ.ವಿ. ರಾಮನ್ ನಗರ ಕ್ಷೇತ್ರದ ಆಕಾಂಕ್ಷಿ ರಮೇಶ್ ಅವರು ಮಹದೇವಪ್ಪ ಸ್ಪರ್ಧೆಗೆ ಸಹಕರಿಸುತ್ತಿಲ್ಲ. ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದಾಗಿ ಮಹದೇವಪ್ಪ ಸ್ಪರ್ಧೆಗೆ ಕೆಲವೊಮ್ಮೆ ಒಪ್ಪಿಕೊಂಡಂತೆ ಕಂಡರೂ ಒಳಗೆ ಅವರ ವಿರುದ್ಧ ಕೆಲಸ ಮಾಡಲಿದ್ದಾರೆ. ಅಷ್ಟೇ ಅಲ್ಲ, ತಮಗೆ ಟಿಕೆಟ್ ದೊರೆಯದಿದ್ದರೆ ಬಂಡಾಯವೇಳುವ ಬೆದರಿಕೆಯನ್ನು ರಮೇಶ್ವೊಡ್ಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಬೆಂಗಳೂರಿನ ಪಕ್ಷದ ಘಟಾನುಘಟಿ ನಾಯಕರಿಗೆ ಪ್ರಭಾವಿ ಮಹದೇವಪ್ಪ ಅವರು ಸಿ.ವಿ. ರಾಮನ್ನಗರದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬೇಕಾಗಿಲ್ಲ. ಒಂದು ವೇಳೆ ಮಹದೇವಪ್ಪ ಸ್ಪರ್ಧಿಸಿದರೂ ಅವರ ವಿರುದ್ಧ ನಗರದ ಕೆಲ ಪ್ರಮುಖ ನಾಯಕರೇ ಕೆಲಸ ಮಾಡುವ ಗುಮಾನಿ ಮಹದೇವಪ್ಪ ಅವರಿಗೆ ಇದೆ ಎನ್ನಲಾಗಿದೆ.
ನರಸೀಪುರಕ್ಕೆ ಕಾಲಿಡಲು ಪುತ್ರ ಬಿಡುತ್ತಿಲ್ಲ!:
ಈ ಎಲ್ಲಾ ಕಾರಣಗಳಿಗಾಗಿ ಬೆಂಗಳೂರು ತ್ಯಜಿಸಲು ಅವರು ನಿರ್ಧರಿಸಿದ್ದು, ಕೆಪಿಸಿಸಿಯು ಟಿಕೆಟ್ಗಾಗಿ ಅರ್ಜಿ ಕರೆದ ಸಂದರ್ಭದಲ್ಲಿ ಮಹದೇವಪ್ಪ ಅವರ ತಮ್ಮ ಪುತ್ರನ ಸಂಗಡ ತಾವೂ ಟಿ. ನರಸೀಪುರ ಕ್ಷೇತ್ರಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ಮಹದೇವಪ್ಪ ಅವರ ಆಪ್ತರ ಪ್ರಕಾರ, ವಾಸ್ತವವಾಗಿ ಅವರಿಗೆ ಟಿ. ನರಸೀಪುರದಿಂದಲೇ ಸ್ಪರ್ಧಿಸುವ ಬಯಕೆಯಿದೆ. ಆದರೆ, ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಹಾಗೂ ಅವರ ಪತ್ನಿ ಇದನ್ನು ಒಪ್ಪುತ್ತಿಲ್ಲ. ಹೀಗೆ ಕುಟುಂಬದ ಒತ್ತಡದಿಂದ ಟೀ. ನರಸೀಪುರ ಕ್ಷೇತ್ರಕ್ಕೆ ಪರ್ಯಾಯ ಕ್ಷೇತ್ರವಾಗಿ ಅವರು ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದತ್ತ ಮುಖ ಮಾಡಿದರೂ ಅಲ್ಲಿ ಗೆಲ್ಲುವ ವಿಶ್ವಾಸ ಇಲ್ಲದ ಕಾರಣ ಆ ನಿರ್ಧಾರ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಮೈಸೂರು ಜಿಲ್ಲೆಯಲ್ಲೂ ಅವರಿಗೆ ಬೇರೆ ಸುರಕ್ಷಿತ ಕ್ಷೇತ್ರವಿಲ್ಲ. ಹೀಗಾಗಿ ನಂಜನಗೂಡು ಕ್ಷೇತ್ರವೇ ಅವರಿಗೆ ಆಪ್ಯಾಯಮಾನವಾಗಿ ಕಂಡಿದೆ. ಆದರೆ, ಈ ಕ್ಷೇತ್ರದ ಟಿಕೆಟ್ ಪಡೆಯಲು ಇರುವ ಏಕೈಕ ಅಡ್ಡಿ ಎಂದರೆ ಹಾಲಿ ಶಾಸಕ ಕಳಲೆ ಕೇಶವಮೂರ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನ ಮೇರೆಗೆ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಕಳಲೆ ಕೇಶವಮೂರ್ತಿ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಗೆಲುವು ಬರಲು ಕಾರಣರಾಗಿದ್ದರು. ಈ ಗೆಲುವುದಿಲ್ಲ ಮಹದೇವಪ್ಪ ಹಾಗೂ ಅವರ ಪುತ್ರ ಸುನೀಲ್ ಬೋಸ್ ಪಾತ್ರವೂ ದೊಡ್ಡದು.
ಹೀಗಾಗಿ ಕಳಲೆ ಕೇಶಮೂರ್ತಿ ಅವರನ್ನು ಮನವೊಲಿಸಿ ತಮಗೆ ಟಿಕೆಟ್ ಕೊಡಿಸಿ ಎಂದು ಮಹದೇವಪ್ಪ ಇದೀಗ ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಯಾವ ತೀರ್ಮಾನ ಕೈಗೊಳ್ಳುವರು ಕಾದು ನೋಡಬೇಕು.
- ಎಸ್.ಗಿರೀಶ್ಬಾಬು