ವಕೀಲರಿಗೆ ಸಾಧನಾ ವರದಿ ಒಪ್ಪಿಸಿದ ಮದ್ರಾಸ್ ಜಡ್ಜ್!
ವಕೀಲರಿಗೆ 2 ವರ್ಷಗಳ ಸಾಧನಾ ವರದಿ ಒಪ್ಪಿಸಿದ ಮದ್ರಾಸ್ ಜಡ್ಜ್!| ಹೈಕೋರ್ಟ್ ನ್ಯಾಯಮೂರ್ತಿ ಅಪರೂಪದ ಕ್ರಮ
ಚೆನ್ನೈ[ಜು.02]: ರಾಜಕಾರಣಿಗಳು ತಾವು ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡ ಕೆಲಸಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವುದು ಮಾಮೂಲಿ. ಹೆಚ್ಚೂಕಡಿಮೆ ಇದೇ ಹಾದಿ ತುಳಿದಿರುವ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು, ಜಡ್ಜ್ ಹುದ್ದೆಗೇರಿದ 2 ವರ್ಷಗಳ ಅವಧಿಯಲ್ಲಿ ತಾವು ಮಾಡಿರುವ ಸಾಧನೆಗಳ ಪಟ್ಟಿಯನ್ನು ವಕೀಲರ ಸಂಘದ ಮುಂದಿಟ್ಟು ಗಮನಸೆಳೆದಿದ್ದಾರೆ. ನ್ಯಾಯಮೂರ್ತಿಯೊಬ್ಬರು ಈ ರೀತಿ ಸಾಧನಾ ವರದಿಯನ್ನು ಬಿಡುಗಡೆಗೊಳಿಸಿರುವುದು ಬಲು ಅಪರೂಪ, ಪ್ರಾಯಶಃ ಇದೇ ಮೊದಲು.
ಜೂ.27ರಂದು ಎರಡು ಪುಟಗಳ ಪತ್ರವನ್ನು ವಕೀಲರ ಸಂಘದ ಸದಸ್ಯರಿಗೆ ಬರೆದಿರುವ ನ್ಯಾ| ಸ್ವಾಮಿನಾಥನ್ ಅವರು, ನ್ಯಾಯಮೂರ್ತಿಯಾಗಿ 2017ರ ಜೂ.28ರಂದು ಅಧಿಕಾರ ವಹಿಸಿಕೊಂಡಿದ್ದೆ. ಈ ಎರಡು ವರ್ಷಗಳ ಅವಧಿಯಲ್ಲಿ 18,944 ಮುಖ್ಯ ಪ್ರಕರಣಗಳನ್ನು ವೈಯಕ್ತಿಕವಾಗಿ ಇತ್ಯರ್ಥಗೊಳಿಸಿದ್ದೇನೆ. 2534 ಪ್ರಕರಣಗಳನ್ನು ವಿವಿಧ ವಿಭಾಗೀಯ ಪೀಠಗಳಲ್ಲಿದ್ದುಕೊಂಡು ಬಗೆಹರಿಸಿದ್ದೇನೆ.
ಹಲವಾರು ಪ್ರಕರಣಗಳ ವಿಚಾರಣೆ ಮುಗಿಸಿ ತೀರ್ಪು ಕಾದಿರಿಸಿದ್ದೇನೆ. ಆ ಪ್ರಕರಣಗಳ ತೀರ್ಪನ್ನು ಪ್ರಕಟಿಸಲಾಗದಿರುವುದಕ್ಕೆ ವಕೀಲರು ಹಾಗೂ ಕಕ್ಷಿದಾರರ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.