ಇದರ ನಡುವೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅನುಸರಿಸಿದ ತಂತ್ರಗಾರಿಕೆ​ಯನ್ನು ಪರಿಣಾಮಕಾರಿ​ಯಾಗಿ ಎದುರಿಸುವಲ್ಲಿ ನಮ್ಮ ಪಕ್ಷದ ಮುಖಂಡರು ವಿಫಲರಾದರು ಎಂಬ ಬೇಸರ ಮತ್ತು ಆಕ್ಷೇಪ ಬಿಜೆಪಿ ಸ್ಥಳೀಯ ಮುಖಂಡರಿಂದ ಕೇಳಿಬಂದಿದೆ.

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡು ಸರಿಯಾಗಿ ಹತ್ತು ದಿನಗಳ ನಂತರ ಸೋಲಿನ ಪರಾಮರ್ಶೆ ನಡೆಸಿದ ಬಿಜೆಪಿ ಮುಖಂಡರು ಆಡಳಿತಾರೂಢ ಕಾಂಗ್ರೆಸ್ಸಿನ ಅಧಿಕಾರ ದುರ್ಬಳಕೆ ಮತ್ತು ಹಣಹಂಚಿಕೆಯೇ ಹಿನ್ನಡೆಗೆ ಕಾರಣ ಎಂಬ ನಿಲವಿಗೆ ಬಂದಿದ್ದಾರೆ.

ಜತೆಗೆ ಉಪಚುನಾವಣೆಯಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್‌ ಜತೆ ಒಳಒಪ್ಪಂದ ಮಾಡಿಕೊಂಡಿರುವುದೂ ಸೋಲಿಗೆ ಪ್ರಮುಖವಾಗಿ ಕಾರಣವಾಯಿತು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಇದರ ನಡುವೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅನುಸರಿಸಿದ ತಂತ್ರಗಾರಿಕೆ​ಯನ್ನು ಪರಿಣಾಮಕಾರಿ​ಯಾಗಿ ಎದುರಿಸುವಲ್ಲಿ ನಮ್ಮ ಪಕ್ಷದ ಮುಖಂಡರು ವಿಫಲರಾದರು ಎಂಬ ಬೇಸರ ಮತ್ತು ಆಕ್ಷೇಪ ಬಿಜೆಪಿ ಸ್ಥಳೀಯ ಮುಖಂಡರಿಂದ ಕೇಳಿಬಂದಿದೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ಹಲವು ಸುದೀರ್ಘ ವಿವಿಧ ಹಂತದ ಮುಖಂಡರ ಅವಲೋಕನ ಸಭೆಯಲ್ಲಿ ಗಂಭೀರ ಚರ್ಚೆಯಾಗದಿದ್ದರೂ ಪಕ್ಷ ಪಡೆದುಕೊಂಡಿರುವ ಮತ ಗಳಿಕೆ ಪ್ರಮಾಣ ಏರಿಕೆಯಾಗಿರುವುದನ್ನು ಗಮನಿಸಬೇಕು. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ತಂತ್ರ ರೂಪಿಸಬೇಕು ಎಂಬ ನಿರ್ಣಯಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ನೀಡಿರಲಿಲ್ಲ. ಕೆಲವರಿಗೆ ಮಾತ್ರ ಕೊಡಲಾಗಿತ್ತು. ಮಾತನಾಡಿದವರು ಕಾಂಗ್ರೆಸ್‌ನತ್ತಲೇ ತಮ್ಮ ಬೆರಳು ತೋರಿದರು. ಆಡಳಿತಾರೂಢ ಕಾಂಗ್ರೆಸ್‌ ಹಣ ಚೆಲ್ಲಿದ ರೀತಿ ಗಾಬರಿ ಹುಟ್ಟಿಸುವಂತಿತ್ತು. ಅದನ್ನು ಎದುರಿಸುವುದು ಬಿಜೆಪಿಗೆ ಸಾಧ್ಯವಿರಲಿಲ್ಲ ಎಂದು ಹೇಳಿದರು ಎನ್ನಲಾಗಿದೆ.