ಲೋಕಸಭೆಯಲ್ಲಿ ಮೂರನೇ ಬಾರಿ ತ್ರಿವಳಿ ತಲಾಖ್ ಅಂಗೀಕಾರ!
ಲೋಕಸಭೆಯಲ್ಲಿ ಮೂರನೆ ಬಾರಿ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ | ಮಸೂದೆ ಮಂಡಿಸಿ ಭಾಷಣ ಮಾಡಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್| 20 ಮುಸ್ಲಿಂ ರಾಷ್ಟ್ರಗಳು ತ್ರಿವಳಿ ತಲಾಖ್ ನಿಷೇಧಿಸಿವೆ ಎಂದ ರವಿಶಂಕರ್ ಪ್ರಸಾದ್| ಮಹಿಳೆಯರ ಸುರಕ್ಷತೆ ಮತ್ತು ಸಮಾನತೆಗಾಗಿ ಜಾರಿಯಾಗಬೇಕಿದೆ ಎಂದ ಸಚಿವ| ಜಾತ್ಯತೀತ ಭಾರತ ತ್ರಿವಳಿ ತಲಾಖ್ ಏಕೆ ನಿಷೇಧಿಸಬಾರದು ಎಂದು ಕೇಳಿದ ಪ್ರಸಾದ್| ಮಸೂದೆ ವಿರೋಧಿಸಿದ ವಿರೋಧ ಪಕ್ಷಗಳು|
ನವದೆಹಲಿ(ಜು.25): ಸಾಕಷ್ಟು ಚರ್ಚೆಗೊಳಗಾಗಿರುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019ನ್ನು ಲೋಕಸಭೆಯಲ್ಲಿ ಮೂರನೇ ಬಾರಿ ಅಂಗೀಕರಿಸಲಾಗಿದೆ.
ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಈ ಮಸೂದೆ ಧರ್ಮಾಧಾರಿತ ಅಲ್ಲ, ಬದಲಿಗೆ ಮಹಿಳೆಯರ ಸುರಕ್ಷತೆ ಮತ್ತು ಸಮಾನತೆಗಾಗಿ ಜಾರಿಯಾಗಬೇಕಿದೆ ಎಂದು ಪ್ರತಿಪಾದಿಸಿದರು.
ಪಾಕಿಸ್ತಾನ ಹಾಗೂ ಮಲೇಷ್ಯಾ ಸೇರಿದಂತೆ 20 ಮುಸ್ಲಿಂ ರಾಷ್ಟ್ರಗಳೇ ತ್ರಿವಳಿ ತಲಾಖ್ ಅನ್ನು ನಿಷೇಧಿಸಿದ್ದು, ಜಾತ್ಯತೀತ ಭಾರತ ಏಕೆ ನಿಷೇಧಿಸಬಾರದು ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಬಹುಮತವಿಲ್ಲದ ಕಾರಣ ಈ ಹಿಂದೆ ಎರಡು ಬಾರಿ ವಿಧೇಯಕ ಅಂಗೀಕಾರ ಆಗಿರಲಿಲ್ಲ. ಈ ಬಾರಿಯೂ ವಿಧೇಯಕಕ್ಕೆ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ವಿರೋಧ ವ್ಯಕ್ತಪಡಿಸಿವೆ.
ಮಸೂದೆಯಲ್ಲಿರುವ ಅಂಶಗಳನ್ನು ವಿರೋಧಿಸಿ ಕಾಂಗ್ರೆಸ್, ಜೆಡಿಯು, ಟಿಎಂಸಿ ಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.