ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ 2016ರಲ್ಲಿ ಭಾರತೀಯ ಸೇನೆಯು ‘ಸರ್ಜಿಕಲ್‌ ದಾಳಿ’ ನಡೆಸಿದ್ದು, ಇದರ ಯಶಸ್ಸಿನ ಹಿಂದಿನ ರಹಸ್ಯವೊಂದನ್ನು ಇದೀಗ ಬಯಲು ಮಾಡಲಾಗಿದೆ.  

ಪುಣೆ: ಭಾರತವು 2016ರ ಸೆಪ್ಟೆಂಬರ್‌ 28 ಹಾಗೂ 29ರಂದು ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ‘ಸರ್ಜಿಕಲ್‌ ದಾಳಿ’ ನಡೆಸಿತ್ತು. ಇದರ 2ನೇ ವರ್ಷಾಚರಣೆಗೆ ಇನ್ನೇನು ಸಿದ್ಧತೆ ನಡೆಯುತ್ತಿದೆ. ಈ ಸರ್ಜಿಕಲ್‌ ದಾಳಿಯ ಯಶಸ್ಸಿನ ಹಿಂದಿನ ಕುತೂಹಲಕರ ರಹಸ್ಯವೊಂದು ಈಗ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೇನೆಗೆ ದಾಳಿಯ ಸಂದರ್ಭದಲ್ಲಿ ನಾಯಿಯ ಬೊಗಳುವಿಕೆ ಭೀತಿ ಇತ್ತು. ನಾಯಿಗಳು ಬೊಗಳಲು ಆರಂಭಿಸಿದರೆ ಉಗ್ರರಿಗೆ ತಮ್ಮ ಪ್ರವೇಶದ ಬಗ್ಗೆ ಗೊತ್ತಾಗಿ ಪ್ರತಿದಾಳಿ ನಡೆಸಬಹುದು ಅಥವಾ ಓಡಿಹೋಗಬಹುದು ಎಂಬ ಆತಂಕವಿತ್ತು. ಇದನ್ನು ತಪ್ಪಿಸಲು ಅವರು ಮಾಡಿದ ‘ಉಪಾಯ’ವೆಂದರೆ ‘ಚಿರತೆ ಮೂತ್ರ’.

‘ಚಿರತೆ ಮೂತ್ರ ಹಾಗೂ ಮಲವೆಂದರೆ ನಾಯಿಗಳು ಹೆದರುತ್ತವೆ. ಈ ಮೂತ್ರ/ಮಲವನ್ನು ಆಘ್ರಾಣಿಸಿದರೆ ನಾಯಿಗಳು ಇಲ್ಲಿ ಚಿರತೆ ಬಂದಿದೆ ಎಂದು ಹೆದರಿ ಬೊಗಳದೇ ತಮ್ಮ ಪಾಡಿಗೆ ತಾವು ಕೂತುಬಿಡುತ್ತವೆ. ಇದೇ ಉಪಾಯವನ್ನು ನಾವು ಮಾಡಿದೆವು. ಚಿರತೆ ಮೂತ್ರವನ್ನು ದಾಳಿ ನಡೆದ ಸ್ಥಳದ ಸುತ್ತಮುತ್ತ ಸಿಂಪಡಿಸಿದೆವು.

ಹೀಗಾಗಿ ನಾಯಿಗಳು ಮುಂದೆ ಬಾರದೇ ತಮ್ಮ ಸ್ಥಳದಲ್ಲೇ ತಾವು ಹೆದರಿ ಕೂತವು. ಆಗ ನಮಗೆ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆಸಲು ಅನುಕೂಲವಾಯಿತು’ ಎಂದು ದಾಳಿಯಲ್ಲಿ ಪಾಲ್ಗೊಂಡಿದ್ದ ನಗ್ರೋತಾ ಕೋರ್‌ ತುಕಡಿಯ ಕಮಾಂಡರ್‌ ಆಗಿದ್ದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಆರ್‌.ಆರ್‌. ನಿಂಭೋರ್ಕರ್‌ ಅವರು ಪುಣೆಯಲ್ಲಿ ಬುಧವಾರ ನಡೆದ ಸಮಾರಂಭವೊಂದರಲ್ಲಿ ಹೇಳಿದರು.