ವೃತ್ತಿಗೆ ವಿದಾಯ ಹೇಳಿ ಪೀಠಾಧಿಪತಿಯಾಗಿ ದೀಕ್ಷೆ ಸ್ವೀಕರಿಸಿದ ಉಪನ್ಯಾಸಕ
ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಯುವಕ ಈಗ ಪ್ರಮುಖ ಮಠದ ಪೀಠಾಧಿಪತಿಯಾಗಿದ್ದಾರೆ.
ಬೆಂಗಳೂರು (ಮಾ. 15): ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಯುವಕ ಈಗ ಪ್ರಮುಖ ಮಠದ ಪೀಠಾಧಿಪತಿಯಾಗಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಯುವಕ ಶಶಿಕುಮಾರ್ ಎಂಬುವವರು ಪೀಠಾಧಿಪತಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ಶ್ರೀ ದೇಗುಲ ಮಠದ 13ನೇಯ ಮಠಾಧಿಪತಿಯಾಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಶ್ರೀ ಮುಮ್ಮುಡಿ ಮಹಾಲಿಂಗ ಸ್ವಾಮಿಗಳು ಆಕಸ್ಮಿಕವಾಗಿ ಕಿರಿಯ ವಯಸ್ಸಿನಲ್ಲೇ ನಿಧನರಾದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಶಶಿಕುಮಾರ್ ಚಾಮರಾಜನಗರ ತಾಲೂಕು ಕುಲಗಾಣ ಗ್ರಾಮದ ಶರಣ ದಂಪತಿ ಕೆ.ಎಸ್. ಗೌರಿಶಂಕರಸ್ವಾಮಿ ಹಾಗೂ ಎಸ್. ಕೋಮಲಾಂಬರ ಪುತ್ರ. ಶಶಿಕುಮಾರ್ ಎಂಬಿಎ ಪದವೀಧರ. ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ಇದುವರೆಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ದೇಗುಲ ಮಠಕ್ಕೆ ಏಳು ಶತಮಾನಗಳ ಇತಿಹಾಸವಿದ್ದು, 45ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮಠ ಮುನ್ನಡೆಸುತ್ತಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಹೊಸಮಠದ ಶ್ರೀ ಚಿದಾನಂದಸ್ವಾಮಿಗಳು ಸೇರಿ ಹಲವರು ಭಾಗಿಯಾಗಿದ್ದರು.