ಇದೇ ಮೊದಲ ಬಾರಿಗೆ ರೈಲ್ವೇ ಬಜೆಟ್, ಹಣಕಾಸು ಬಜೆಟ್​ನಲ್ಲೇ ವಿಲೀನಾಗಿದೆ. ಪ್ರತಿ ವರ್ಷ ರೈಲ್ವೇ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುತ್ತಿತ್ತು. ಆದರೆ, ಈ ಬಾರಿ ರೈಲ್ವೇ ಬಜೆಟ್​ನ್ನು ಕೂಡಾ ಹಣಕಾಸು ಸಚಿವ ಅರುಣ್ ಜೇಟ್ಲಿಯವರೇ ಮಂಡಿಸಲಿದ್ದಾರೆ. ಈ ಬಾರಿಯ ವಿಶೇಷವೇನು ಗೊತ್ತಾ..? ರಾಜ್ಯದ ರೈಲ್ವೇ ಪ್ರಯಾಣಿಕರು ರೈಲ್ವೇ ಬಜೆಟ್​ಗೆ ಬೇಡಿಕೆಯ ಪಟ್ಟಿ ಕಳಿಸಿಕೊಟ್ಟಿರುವುದು. ಪ್ರಯಾಣಿಕರ ಅಭಿಪ್ರಾಯ ಪಡೆದು ಬಜೆಟ್ ರೂಪಿಸುತ್ತಿರುವುದು ಕೂಡಾ ರೈಲ್ವೇ ಬಜೆಟ್ ಇತಿಹಾಸದಲ್ಲಿ ಇದೇ ಮೊದಲು. ಶಾಸಕ, ಸಂಸದರ ಅಭಿಪ್ರಾಯಗಳನ್ನೂ ಈ ಬೇಡಿಕೆಯಲ್ಲಿ ಪರಿಗಣಿಸಲಾಗಿದೆ.

ನವದೆಹಲಿ(ಫೆ.01): ಇದೇ ಮೊದಲ ಬಾರಿಗೆ ರೈಲ್ವೇ ಬಜೆಟ್, ಹಣಕಾಸು ಬಜೆಟ್​ನಲ್ಲೇ ವಿಲೀನಾಗಿದೆ. ಪ್ರತಿ ವರ್ಷ ರೈಲ್ವೇ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುತ್ತಿತ್ತು. ಆದರೆ, ಈ ಬಾರಿ ರೈಲ್ವೇ ಬಜೆಟ್​ನ್ನು ಕೂಡಾ ಹಣಕಾಸು ಸಚಿವ ಅರುಣ್ ಜೇಟ್ಲಿಯವರೇ ಮಂಡಿಸಲಿದ್ದಾರೆ. ಈ ಬಾರಿಯ ವಿಶೇಷವೇನು ಗೊತ್ತಾ..? ರಾಜ್ಯದ ರೈಲ್ವೇ ಪ್ರಯಾಣಿಕರು ರೈಲ್ವೇ ಬಜೆಟ್​ಗೆ ಬೇಡಿಕೆಯ ಪಟ್ಟಿ ಕಳಿಸಿಕೊಟ್ಟಿರುವುದು. ಪ್ರಯಾಣಿಕರ ಅಭಿಪ್ರಾಯ ಪಡೆದು ಬಜೆಟ್ ರೂಪಿಸುತ್ತಿರುವುದು ಕೂಡಾ ರೈಲ್ವೇ ಬಜೆಟ್ ಇತಿಹಾಸದಲ್ಲಿ ಇದೇ ಮೊದಲು. ಶಾಸಕ, ಸಂಸದರ ಅಭಿಪ್ರಾಯಗಳನ್ನೂ ಈ ಬೇಡಿಕೆಯಲ್ಲಿ ಪರಿಗಣಿಸಲಾಗಿದೆ.

ಕರ್ನಾಟಕ ಜನತೆಯ ಬೇಡಿಕೆ

-ಬೆಂಗಳೂರಿಗೆ ಸಬರ್​ಬನ್ ರೈಲು ಬೇಕು

-ಗದಗ ಮೂಲಕ ಹುಬ್ಬಳ್ಳಿ - ದೆಹಲಿ ರೈಲು

-ಹುಬ್ಬಳ್ಳಿ - ಚೆನ್ನೈ ಮಧ್ಯೆ ಪ್ರತಿನಿತ್ಯ ರೈಲು

-ಕೊಟ್ಟೂರು ಮತ್ತು ಹರಿಹರ

-ಕಡೂರು, ಚಿಕ್ಕಮಗಳೂರು, ಸಕಲೇಶಪುರ

-ತುಮಕೂರು-ಚಿತ್ರದುರ್ಗ- ದಾವಣಗೆರೆ

ರೈಲ್ವೇ ಹಳಿ ವಿಸ್ತರಣೆಯ ಬೇಡಿಕೆಗಳು
ರೈಲ್ವೇ ಹಳಿ ವಿಸ್ತರಣೆಯ ಬೇಡಿಕೆಗಳಲ್ಲಿ, ತಾಳಗುಪ್ಪ -ಹೊನ್ನಾವರ, ಗದಗ -ಹಾವೇರಿ, ವಿಜಯಪುರ- ಶಹಬಾದ್, ಆಲಮಟ್ಟಿ -ಕೊಪ್ಪಳ, ಕೊಟ್ಟೂರು -ಚಿತ್ರದುರ್ಗ, ಗದಗ -ವಾಡಿ, ಕೊಪ್ಪಳ -ಸಿಂಧನೂರು, ಯಾದಗಿರಿ -ಆಲಮಟ್ಟಿ ಹಾಗೂ ಧಾರವಾಡ - ಬೈಲಹೊಂಗಲ - ಬೆಳಗಾವಿ ರೈಲ್ವೇ ಹಳಿಗಳಿವೆ.

ಪ್ರಯಾಣ ದರ ಏರಿಕೆಯಾದರೂ ಅಚ್ಚರಿಯಿಲ್ಲ..!

ಹಲವು ವರ್ಷಗಳಿಂದ ರೈಲ್ವೇ ಪ್ರಯಾಣ ದರ ಏರಿಕೆಯಾಗಿರಲಿಲ್ಲ. 2014ರಲ್ಲಿ ಏರಿಕೆಯಾಗಿದ್ದರೂ, ಅದು ನಷ್ಟವನ್ನು ಸರಿದೂಗಿಸುವ ಮಟ್ಟದಲ್ಲಿರಲಿಲ್ಲ. ರೈಲ್ವೆ ಪ್ರಯಾಣ ದರ ಏರಿಕೆಯಾಗದ ಹೊರತು, ಸಂಪನ್ಮೂಲ ಕ್ರೋಢೀಕರಣ ಸಾಧ್ಯವೇ ಇಲ್ಲ. ಜನಪ್ರಿಯತೆಗಾಗಿ ರಾಜಿಯಾಗುವುದು ಬೇಡ ಎನ್ನುವ ಪ್ರಸ್ತಾವನೆ ಅಧಿಕಾರಿಗಳ ಕಡೆಯಿಂದ ಹೋಗಿದೆಯಂತೆ. ಅದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತೋ ನೋಡಬೇಕು.

ರೈಲ್ವೇ ನೌಕರರ ಬೇಡಿಕೆಗಳು

-ನೌಕರರಿಗೆ ಬೆನಿಫಿಟ್​​ ಫಂಡ್

-ಸುಸಜ್ಜಿತ ಸಮುದಾಯ ಭವನ

-ಮಹಿಳಾ ನೌಕರರಿಗೆ ವಿಶ್ರಾಂತಿ ಕೊಠಡಿ

-ರಕ್ಷಣಾ ಪಡೆಯಲ್ಲಿ ಖಾಲಿಯಿರುವ 1.5 ಲಕ್ಷ ಹುದ್ದೆ ಭರ್ತಿ

ರೈಲ್ವೇ ನೌಕರರ ಬೇಡಿಕೆಗಳೂ ಹಲವಾರಿವೆ. ನೌಕರರಿಗೆ ಬೆನಿಫಿಟ್​​ ಫಂಡ್ ಯೋಜನೆ, ಸುಸಜ್ಜಿತ ಸಮುದಾಯ ಭವನ ನಿರ್ಮಾಣದ ಬೇಡಿಕೆಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಈ ಬಾರಿ ಮಹಿಳಾ ನೌಕರರು, ರೈಲ್ವೇ ನಿಲ್ದಾಣಗಳಲ್ಲಿ ಪ್ರತ್ಯೇಕ ವಿಶ್ರಾಂತಿ ಕೊಠಡಿಯ ಬೇಡಿಕೆಯಿಟ್ಟಿದ್ದಾರೆ. ಮತ್ತು ದುರಂತಗಳನ್ನು ತಪ್ಪಿಸಲು ರಕ್ಷಣಾ ಪಡೆಯಲ್ಲಿ ಖಾಲಿಯಿರುವ 1.5 ಲಕ್ಷ ಹುದ್ದೆಗಳ ಭರ್ತಿಯ ಬೇಡಿಕೆಯೂ ನೌಕರರ ವಲಯದಿಂದ ಕೇಳಿ ಬಂದಿದೆ.

ಏನಿದ್ದರೂ, ರೈಲ್ವೇ ಬಜೆಟ್, ಎರಡರಿಂದ ಮೂರು ಪುಟಗಳಲ್ಲಿ ಮುಗಿದು ಹೋಗಬಹುದು. ಹೊಸ ಯೋಜನೆಗಳಿಗಿಂತ ಇರುವ ಯೋಜನೆಗಳಿಗೇ ಅನುದಾನ ಬಿಡುಗಡೆ, ವರ್ಷಾನುಗಟ್ಟಲೆಯಿಂದ ಪೆಂಡಿಂಗ್ ಇರುವ ಯೋಜನೆಗಳಿಗೆ ಹಣ ಹೊಂದಿಸುವುದೇ ಮೊದಲಾದ ಕ್ರಿಯಾತ್ಮಕ ಹೆಜ್ಜೆಗಳನ್ನಿಡುತ್ತೇವೆ ಎನ್ನುತ್ತಿದೆ ರೈಲ್ವೇ ಇಲಾಖೆ. ಉದಾಹರಣೆಗೆ ಕೋಲಾರದಲ್ಲಿ ರೈಲ್ವೇ ಬೋಗಿ ನಿರ್ಮಾಣ ಘಟಕ, 2013ರಲ್ಲಿ ಘೋಷಣೆಯಾಗಿತ್ತು. ಶುರುವಾಗಿಲ್ಲ. ಇಂತಹ ನೂರಾರು ಯೋಜನೆಗಳು ಫೈಲ್​ನಲ್ಲೇ ದೂಳು ತಿನ್ನುತ್ತಿವೆ. ಪ್ರಯಾಣಿಕರ ನಿರೀಕ್ಷೆ ದೊಡ್ಡಮಟ್ಟದಲ್ಲಿದೆ. ರಾಜ್ಯದ ನಿರೀಕ್ಷೆಯೂ ಕೂಡಾ.