ರಾಜೀನಾಮೆ ನೀಡಿದ ಕೈ ನಾಯಕನಿಂದ ಸಿಎಂ ಭೇಟಿ : ಕುತೂಹಲದ ಮೂಡಿಸಿದ ನಡೆ
ಕರ್ನಾಟಕ ರಾಜಕೀಯ ಹೈ ಡ್ರಾಮಾ ಮುಕ್ತಾಯವನ್ನೇ ಕಾಣುತ್ತಿಲ್ಲ. ಆದರೆ ಇದೇ ವೇಳೆ ಅತೃಪ್ತ ನಾಯಕನೋರ್ವ ಸಿಎಂ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು [ಜು.12] : ಪಕ್ಷದ ಮುಖಂಡರ ನಡೆಯ ಬಗ್ಗೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ಸಿನ ರೋಷನ್ ಬೇಗ್ ಅವರು ಗುರುವಾರ ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಬೇಗ್ ಅವರು ಮುಖ್ಯಮಂತ್ರಿಗಳನ್ನು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ವೇಳೆ ಕುಮಾರಸ್ವಾಮಿ ಅವರು ರೋಷನ್ ಬೇಗ್ ಅವರ ಮನವೊಲಿಕೆ ಪ್ರಯತ್ನ ನಡೆಸಿದರು ಎನ್ನಲಾಗಿದೆ.
ಇದೇ ವೇಳೆ ಬಹುಕೋಟಿ ವಂಚನೆಯ ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿಯೂ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿರುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ನೋಟಿಸ್ ನೀಡಿತ್ತು. ಆದರ, ವಿಚಾರಣೆಗೆ ಹಾಜರಾಗಲು ತಮಗೆ ಮೂರು ವಾರಗಳ ಕಾಲಾವಕಾಶ ನೀಡುವಂತೆ ರೋಷನ್ ಬೇಗ್ ಅವರು ಮನವಿ ಮಾಡಿದರೂ ಒಪ್ಪದ ಎಸ್ಐಟಿ ಇದೇ ತಿಂಗಳ 15ರಂದು ಹಾಜರಾಗುವಂತೆ ಸೂಚಿಸಿದೆ. ಹೀಗಾಗಿ, ಈ ಪ್ರಕರಣ ಕುರಿತು ಚರ್ಚೆ ನಡೆಸಿರಬಹುದು ಎಂದು ಹೇಳಲಾಗಿದೆ.
ಆದರೆ, ಈ ಬಗ್ಗೆ ಖಚಿತಪಡಿಸಿಕೊಳ್ಳಲು ರೋಷನ್ ಬೇಗ್ ಅವರನ್ನು ಸಂಪರ್ಕಿಸಲು ಕರೆ ಮಾಡಿದಾಗ ಮೊಬೈಲ್ ಸ್ವೀಚ್ ಆಫ್ ಆಗಿತ್ತು.