ವಿಶ್ವಾಸ ಸಾಬೀತಿಗೆ ರಾಜ್ಯಪಾಲರ ಡೆಡ್ಲೈನ್, ಉಳಿದಿರುವುದು ಕೆಲವೇ ಗಂಟೆ!
ರಾಜ್ಯದ ರಾಜಕೀಯ ಪ್ರಹಸನಕ್ಕೆ ಅಂತ್ಯ ಹಾಡಲು ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿದ್ದಾರೆ. ವಿಶ್ವಾಸಮತ ಕೇಳುವಲ್ಲಿ ವಿಳಂಬ ಮಾಡುತ್ತಿದ್ದ ದೋಸ್ತಿಗಳಿಗೆ ರಾಜ್ಯಪಾಲರು ಶಾಕ್ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿರುವ ರಾಜ್ಯಪಾಲ ವಿಆರ್ ವಾಲಾ ಡೆಡ್ಲೈನ್ ನೀಡಿದ್ದಾರೆ.
ಬೆಂಗಳೂರು[ಜು. 18] ನಾಳೆ ಮಧ್ಯಾಹ್ನ ಅಂದರೆ ಶುಕ್ರವಾರ ಮಧ್ಯಾಹ್ಹ 1.30ರೊಳಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಮಾಡಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಆದೇಶ ನೀಡಿದ್ದಾರೆ. ಈ ಮೂಲಕ ಮತ್ತಷ್ಟು ಸಾಂವಿಧಾನಿಕ ಪ್ರಶ್ನೆಗಳು ಎದ್ದಿವೆ.
ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ಒಂದು ಡೆಡ್ ಲೈನ್ ಫಿಕ್ಸ್ ಮಾಡಿದ್ದಾರೆ. ಸದನ ನಡೆಯುತ್ತಿರುವಾಗ ಸದನದ ಒಳಗಡೆ ರಾಜ್ಯಪಾಲರು ಪ್ರವೇಶ ಮಾಡಬಹುದೆ? ಈ ಅಧಿಕಾರ ವ್ಯಾಪ್ತಿಯಲ್ಲಿ ರಾಜ್ಯಪಾಲರು ಪ್ರವೇಶ ಮಾಡಬಹುದೆ? ಇನ್ನು ಮತ್ತೆ ಈ ಕರ್ನಾಟಕ ರಾಜಕೀಯ ಗೊಂದಲ ವಿಚಾರಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಏರುತ್ತಾರಾ? ಅನೇಕ ಪ್ರಶ್ನೆಗಳು ಎದ್ದಿವೆ.
ವಿಶ್ವಾಸಮತವೂ ಇಲ್ಲ, ವಿಪ್ ಚರ್ಚೆಯೂ ಇಲ್ಲ.. ಗದ್ದಲದಲ್ಲೇ ಗುರುವಾರದ ಕಲಾಪ ಖತಂ
ಸಾಂವಿಧಾನಿಕ ಬಿಕ್ಕಟ್ಟು ಕಾಣಿಸಿಕೊಂಡಾಗ ರಾಜ್ಯಪಾಲರು ಮಧ್ಯಪ್ರವೇಶ ಮಾಡಲು ಅವಕಾಶ ಇದೆ. ಅದರಂತೆ ಇದೀಗ ರಾಜ್ಯಪಾಲರು ಸಿಎಂಗೆ ಆದೇಶ ನೀಡಿದ್ದಾರೆ. ಗಮನಿಸಬೇಕಾದ ಅಂಶ ಎಂದರೆ ಇಲ್ಲಿ ಆದೇಶ ನೀಡಿರುವುದು ಸಿಎಂಗೆ ಹೊರತು ಸ್ಪೀಕರ್ ಗೆ ಅಲ್ಲ.
ಇದೀಗ ಈ ಆದೇಶವನ್ನು ಪ್ರಶ್ನೆ ಮಾಡಲು ಇರುವ ಏಕೈಕ ಸ್ಥಳ ಸುಪ್ರೀಂ ಕೋರ್ಟ್. ಹಾಗಾದರೆ ಮತ್ತೆ ಮಧ್ಯರಾತ್ರಿ ವಿಚಾರಣೆ ಆರಂಭವಾಗಲಿದೆಯೇ? ಕಾದು ನೋಡುವುದೊಂದೇ ರಾಜ್ಯದ ಜತೆಗೆ ದೇಶದ ಜನರ ಮುಂದೆ ಉಳಿದುಕೊಂಡಿರುವ ಒಂದೇ ಆಯ್ಕೆ.