ರಾಜೀನಾಮೆ ನೀಡಲ್ಲ ಎಂದು ಉಲ್ಟಾ ಹೊಡೆದ ಕಾಂಗ್ರೆಸ್ ಶಾಸಕ
ರಾಜ್ಯ ರಾಜಕೀಯದ ಪ್ರಹಸನ ಮುಂದುವರಿದಿದ್ದು, ರಾಜೀನಾಮೆ ಪರ್ವವೂ ಮುಂದುವರಿದಿದೆ. ಇದೇ ವೇಳೆ ಕೈ ಶಾಸಕರೋರ್ವರು ಉಲ್ಟಾ ಹೊಡೆದಿದ್ದಾರೆ.
ಬೆಂಗಳೂರು[ಜು.09] : ಕಳೆದ ಕೆಲವು ದಿನಗಳಿಂದ ಅತೃಪ್ತಿ, ಆಕ್ರೋಶ, ರಾಜೀನಾಮೆ, ಬಂಡಾಯ, ಮುಂಬೈ, ರೆಸಾರ್ಟ್ ಗಳಿಂದ ತುಂಬಿಕೊಂಡಿರುವ ರಾಜ್ಯ ರಾಜಕಾರಣವು ಕ್ಷಣಕ್ಷಣಕ್ಕೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಇದೇ ವೇಳೆ ರಾಜೀನಾಮೆ ನೀಡುತ್ತಾರೆ ಎನ್ನಲಾಗಿದ್ದ ಕೈ ಮುಖಂಡ ರಹೀಂ ಖಾನ್ ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮುನಿಸು ವ್ಯಕ್ತಪಡಿಸಿದ್ದ ರಹೀಂ ಖಾನ್ ರಾಜೀನಾಮೆ ನೀಡುವ ವಿಚಾರ ಸಾಕಷ್ಟು ಸದ್ದು ಮಾಡಿದ್ದ ಬೆನ್ನಲ್ಲೇ ಸ್ವತಃ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಪಕ್ಷದಲ್ಲಿ ಎಲ್ಲವೂ ಸರಿಯಾಗಿದ್ದು, ಆದ್ದರಿಂದ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.ತಮ್ಮ ಕ್ಷೇತ್ರದ ನುದಾನ ಹಂಚಿಕೆ ಬಗ್ಗೆ ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದ ಅವರು, ಅನುದಾನದ ಬಗ್ಗೆ ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ತಮ್ಮ ನಿರ್ಧಾರ ಬದಲಾಗಿದೆ ಎಂದಿದ್ದಾರೆ.
ಇನ್ನು ಬಿಜೆಪಿ ನಾಯಕರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾನೂ ಯಾವ ಅತೃಪ್ತರನ್ನು ಸಂಪರ್ಕಿಸಿಲ್ಲ ಎಂದು ಸುವರ್ಣ ನ್ಯೂಸ್.ಕಾಂ ಗೆ ರಹೀಂ ಖಾನ್ ಸ್ಪಷ್ಟನೆ ನೀಡಿದ್ದಾರೆ.