ಮಂಗಳವಾರಕ್ಕೆ ಮುಹೂರ್ತ, ಸಂಜೆ 6 ಗಂಟೆಯೊಳಗೆ ಎಲ್ಲವೂ ಮುಗಿಬೇಕ್!
ವಿಶ್ವಾಸ ಮತದ ಹಗ್ಗ ಜಗ್ಗಾಟಕ್ಕೆ ಸೋಮವಾರವೂ ಬಿದ್ದಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಿಎಂ ಕುಮಾರಸ್ವಾಮಿ ತಮ್ಮ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.
ಬೆಂಗಳೂರು[ಜು. 22] ವಿಶ್ವಾಸ ಮತ ಯಾಚನೆಗೆ ಮತ್ತೊಂದು ಮುಹೂರ್ತ ಫಿಕ್ಸ್ ಆಗಿದೆ. ಸ್ಪೀಕರ್ ರಮೇಶ್ ಕುಮಾರ್ ಅಂತಿಮವಾಗಿ ಕಲಾಪವನ್ನು ನಾಳೆ ಅಂದರೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದ್ದಾರೆ. ಮಂಗಳವಾರ 6 ಗಂಟೆ ಒಳಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿದ್ದಾರೆ.
ಮಂಗಳವಾರ ಸಂಜೆ 4 ಗಂಟೆಯೊಳಗೆ ಚರ್ಚೆ ಮುಗಿಸಿ ಸಂಜೆ 6 ಗಂಟೆ ವೇಳೆಗೆ ವಿಶ್ವಾಸಮತ ಪೂರ್ಣಗೊಳಿಸೋಣ ಎಂದು ಸಮಯ ನಿಗದಿ ಮಾಡಿ ಸ್ಪೀಕರ್ ರಮೇಶ್ ಕುಮಾರ್ ತೆರಳಿದರು.
ಪಾಪ ನಮ್ಮ ನಾಯಕರಿಗೆ ರಾತ್ರಿ ಊಟ ಇಲ್ಲ, ರೇವಣ್ಣ ನಿದ್ದೆಗೂ ಬ್ರೇಕ್ ಬಿದ್ದಿಲ್ಲ!
ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಆರಂಭವಾದ ಚರ್ಚೆ ನಿರಂತರವಾಗಿ ರಾತ್ರಿ 11.30ರವರೆಗೂ ಮುಂದುವರಿದಿತ್ತು. ಶಾಸಕರು ತಮ್ಮ ತಮ್ಮ ಅಭಿಪ್ರಾಯ ಹೊರ ಹಾಕಿದರು. ಅದೆಷ್ಟೂ ಹೈಡ್ರಾಮಾಗಳು ನಡೆದರೂ ಅಂತಿಮವಾಗಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಇಡೀ ದಿನ ಕಾಳಹರಣ, ವ್ಯರ್ಥ ಚರ್ಚೆಗಳು, ಬೇಡದ ಗಲಾಟೆ, ಆಡಳಿತ ಪಕ್ಷದವರಿಂದಲೇ ಧಿಕ್ಕಾರ.... ಅಂತೂ ಇಂತೂ ಮಧ್ಯರಾತ್ರಿ ಕಳೆದ ಮೇಲೆ ಇನ್ನೊಂದು ದಿನ ದೋಸ್ತಿ ಸರ್ಕಾರಕ್ಕೆ ಆಕ್ಸಿಜನ್ ಸಿಕ್ಕಿದೆ.