ನಾಮಪತ್ರ ಸಲ್ಲಿಕೆವರೆಗೆ ಅಭ್ಯರ್ಥಿಗಳು ಮೈಕ್ ಬಳಸಿ ಪ್ರಚಾರ ಮಾಡುವಂತಿಲ್ಲ
ಚುನಾವಣೆಯೆಂದರೆ ಮೈಕಾಸುರನ ಅಬ್ಬರ. ಅಭ್ಯರ್ಥಿಗಳ ಪ್ರಚಾರಕ್ಕೆ ಧ್ವನಿವರ್ಧಕವೇ ಪ್ರಮುಖ ಆಸರೆ. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಧ್ವನಿವರ್ಧಕ ಬಳಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಇದರಿಂದಾಗಿ ಕೆಲ ಅಭ್ಯರ್ಥಿಗಳು ಕಂಗಾಲಾಗಿದ್ದು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ತುರುವೇಕೆರೆ/ ಚಿಂತಾಮಣಿ : ಚುನಾವಣೆಯೆಂದರೆ ಮೈಕಾಸುರನ ಅಬ್ಬರ. ಅಭ್ಯರ್ಥಿಗಳ ಪ್ರಚಾರಕ್ಕೆ ಧ್ವನಿವರ್ಧಕವೇ ಪ್ರಮುಖ ಆಸರೆ. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಧ್ವನಿವರ್ಧಕ ಬಳಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಇದರಿಂದಾಗಿ ಕೆಲ ಅಭ್ಯರ್ಥಿಗಳು ಕಂಗಾಲಾಗಿದ್ದು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಚುನಾವಣಾ ಆಯೋಗ ಪ್ರಸ್ತುತ ಚುನಾವಣೆಯಲ್ಲಿ ಮೈಕ್ ಬಳಸಿ ಪ್ರಚಾರಕ್ಕೆ ಅನುಮತಿ ನೀಡದಿರುವುದನ್ನು ಪ್ರಶ್ನಿಸಿ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಅವರು ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗುವವರೆಗೂ ಸ್ವತಂತ್ರ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಎಂದು ಚಿಂತಾಮಣಿ ತಾಲೂಕು ಚುನಾವಣಾಧಿಕಾರಿಗಳು ನೀಡಿದ ಹಿಂಬರಹದ ಮೇಲೆ ಚಿಂತಾಮಣಿ ಮಾಜಿ ಶಾಸಕ ಎಂ.ಸಿ. ಸುಧಾಕರ್ ಅವರು ಮಂಗಳವಾರ ರಾಜ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಪ್ರಚಾರಕ್ಕೆ ಅನುಮತಿ ಕೋರಿದ್ದಾರೆ. ಬುಧವಾರ ಈ ಅರ್ಜಿ ವಿಚಾರಣೆ ನಡೆಯಲಿದೆ.
ಇದೇ ರೀತಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುನ್ನ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತುರುವೇಕೆರೆಯ ಚುನಾವಣಾ ಸ್ಪರ್ಧಾಕಾಂಕ್ಷಿ ಎಂ.ಡಿ.ರಮೇಶ್ಗೌಡ ರಾಜ್ಯ ಚುನಾವಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಯಾವುದೇ ಪಕ್ಷಗಳಿಂದ ಸ್ಪರ್ಧೆ ಬಯಸದೇ ಸ್ಪತಂತ್ರವಾಗಿ ಕಣಕ್ಕಿಳಿಯುವವರಿಗೆ ಧ್ವನಿವರ್ಧಕ ಬಳಕೆಗೆ ಅವಕಾಶ ಕಲ್ಪಿಸಿಕೊಡಬೇಕು. ನಾಮಪತ್ರ ಸಲ್ಲಿಕೆಗೆ ತಮ್ಮ ಬೆಂಬಲಿಗರನ್ನು ಕ್ಷೇತ್ರದಾದ್ಯಂತ ಕರೆ ತರಲು ಅಥವಾ ಮಾಹಿತಿ ನೀಡಲು ಪ್ರಚಾರವೊಂದೇ ಮೂಲ. ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಆ ವೇಳೆಗೆ ಪ್ರತಿ ಮನೆ ಮನೆಗೆ ತೆರಳಲು ಸಾಧ್ಯವೇ?
ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದಲ್ಲಿ ಅಭ್ಯರ್ಥಿಯಾಗ ಬಯಸುವ ವ್ಯಕ್ತಿಯ ಬೆಂಬಲಿಗರು ನಾಮಪತ್ರ ಸಲ್ಲಿಕೆ ವೇಳೆ ಹಾಜರಾಗಲು ಸಾಧ್ಯವಿದೆ. ಆದ್ದರಿಂದ ಚುನಾವಣಾಧಿಕಾರಿಗಳು ಧ್ವನಿವರ್ಧಕ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಎಂ.ಡಿ.ರಮೇಶ್ ಗೌಡ ಒತ್ತಾಯಿಸಿದ್ದಾರೆ. ಇತರೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯ ಏಕೆ ಎಂದು ರಮೇಶ್ಗೌಡ ಪ್ರಶ್ನಿಸಿದ್ದಾರೆ.