ಮೈತ್ರಿ ಸರ್ಕಾರದಿಂದ 142 ಕ್ರಿಮಿನಲ್‌ ಕೇಸ್‌ ವಾಪಸ್‌!| 21 ಜಿಲ್ಲೆಗಳಲ್ಲಿ ಕೋಮು ಸಂಘರ್ಷದ 98 ಕ್ರಿಮಿನಲ್‌ ಕೇಸ್‌ ದಿಢೀರ್‌ ರದ್ದು

ಮಂಗಳೂರು[ಏ.03]: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯ ಮೈತ್ರಿ ಸರ್ಕಾರ 21 ಜಿಲ್ಲೆಗಳಲ್ಲಿ ದಾಖಲಾಗಿರುವ ಕೋಮು ಸಂಘರ್ಷ ಸೇರಿದಂತೆ ವಿವಿಧ ಸ್ವರೂಪದ ಒಟ್ಟು 142 ಪ್ರಕರಣಗಳನ್ನು ಬೇಷರತ್ತಾಗಿ ರದ್ದುಪಡಿಸಿದೆ. ಇದರಲ್ಲಿ ಗಂಭೀರ ಸ್ವರೂಪದ ಪ್ರಕರಣಗಳೂ ಸೇರಿದ್ದು ವಾಪಸ್‌ ಪಡೆಯಲು ಯಾವುದೇ ನಿರ್ದಿಷ್ಟಕಾರಣಗಳನ್ನು ನೀಡಿಲ್ಲ. ಈ ವಿಚಾರ ಮಾಹಿತಿ ಹಕ್ಕಿನಲ್ಲಿ ಬಹಿರಂಗಕ್ಕೆ ಬಂದಿದೆ.

Add Asianetnews Kannada as a Preferred SourcegooglePreferred

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರ ಮೇಲಿನ ಕೋಮು ಸಂಘರ್ಷದ ಕ್ರಿಮಿನಲ್‌ ಪ್ರಕರಣ ಕೈಬಿಡುವಂತೆ ಎಲ್ಲ ಜಿಲ್ಲಾ ಪೊಲೀಸ್‌ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಸುತ್ತೋಲೆಯನ್ನು ವಾಪಸ್‌ ಪಡೆಯಲಾಗಿತ್ತು.

ಇದೀಗ ಮೈತ್ರಿ ಸರ್ಕಾರ 15-6-2018, 20-10-2018 ಮತ್ತು 7-8-2018ರಂದು ಹೊರಡಿಸಿದ ಈ ಮೂರು ಆದೇಶದಂತೆ ಕ್ರಿಮಿನಲ್‌ ಮೊಕದ್ದಮೆಗಳನ್ನು ಕೈಬಿಡಲಾಗಿದೆ. 2018ರ ಅಕ್ಟೋಬರ್‌ನಿಂದ 2019ರ ಜನವರಿ ಅವಧಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕ್ರಿಮಿನಲ್‌ ಪ್ರಕರಣಗಳನ್ನು ಸದ್ದಿಲ್ಲದೆ ಹಿಂದಕ್ಕೆ ಪಡೆದುಕೊಂಡಿದೆ. ಒಟ್ಟು 142 ಕ್ರಿಮಿನಲ್‌ ಪ್ರಕರಣಗಳಲ್ಲಿ 98 ಕೋಮು ಸಂಘರ್ಷದ ಪ್ರಕರಣಗಳು ಸೇರಿವೆ. ಉಳಿದಂತೆ 30 ಪ್ರಕರಣಗಳು ರೈತರ ಹೋರಾಟಕ್ಕೆ ಸಂಬಂಧಿಸಿದ್ದಾಗಿದ್ದು, ಇತರೆ 14 ಪ್ರಕರಣಗಳು ಕೈಗಾರಿಕೆಗಳಿಗೆ ಸಂಬಂಧಿಸಿದ್ದಾಗಿದೆ.