ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, 7.5 ಕೋಟಿ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಶಿಕ್ಷಣ ಸಚಿವ ಪ್ರಧಾನ್ ಪದಚ್ಯುತಿ ಹಾಗೂ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದು, ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ‘ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಶಿಕ್ಷಣ ವ್ಯವಸ್ಥೆ ಕುಸಿದಿದ್ದರಿಂದ 7.5 ಕೋಟಿ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ. ಇಷ್ಟು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ, ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಮೋದಿ ಸರ್ಕಾರ ನಮ್ಮ ವಿದ್ಯಾರ್ಥಿಗಳ ಜೀವನವನ್ನು ನಾಶಪಡಿಸುತ್ತಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಪ್ರತಿಭಟನಾನಿರತ ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ. ಅವರು ಕೇವಲ ನ್ಯಾಯಯುತವಾದ ಶಿಕ್ಷಣ ವ್ಯವಸ್ಥೆಯನ್ನು ಕೇಳುತ್ತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ವ್ಯವಸ್ಥಿತವಾಗಿ ಪಕ್ಷಪಾತದಿಂದ ಕೂಡಿದೆ ಮಾತ್ರವಲ್ಲದೆ, ಅದು ಕೈಗೆಟುಕುವಂತೆಯೂ ಇಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಹೀಗೇಕೆ ಆಗುತ್ತಿದೆ ಎಂಬುದು ಪ್ರಶ್ನೆ. ಭದ್ರತಾ ಪಡೆಗಳಿಂದ ಹಲ್ಲೆಗೊಳಗಾಗಲು ಅವರು ಅಂಥದ್ದೇನು ಮಾಡಿದ್ದಾರೆ?’ ಎಂದು ಸಿಜೆಪಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದರು.
10 ವರ್ಷದಲ್ಲಿ 152 ಸೋರಿಕೆ
‘ಕಳೆದ ಒಂದು ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದಾಗಿ 7.5 ಕೋಟಿ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ. 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ, ಈವರೆಗೆ ಒಬ್ಬರಿಗೂ ಶಿಕ್ಷೆಯಾಗಿಲ್ಲ. ಕುಟುಂಬಗಳ ವಾರ್ಷಿಕ ಪರೀಕ್ಷೆಯ ವೆಚ್ಚ 1.32 ಲಕ್ಷ ಕೋಟಿ ರು., ಇದು ಸುಮಾರು 1.4 ಲಕ್ಷ ಕೋಟಿ ರು. ಶೈಕ್ಷಣಿಕ ಬಜೆಟ್ಗೆ ಸಮಾನವಾಗಿದೆ. ಇದು ಸರ್ಕಾರದ ಶುದ್ಧ ಕಳ್ಳತನವಾಗಿದೆ. ಹೀಗೆ ಜನರ ಹಣವನ್ನು ಕದ್ದ ನಂತರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುತ್ತೀರಿ’ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಕ್ಷಮೆ ಯಾಚಿಸಲಿ
‘ವಿದ್ಯಾರ್ಥಿಗಳು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಮೊದಲನೆಯದಾಗಿ ಭ್ರಷ್ಟ ಪ್ರಧಾನ್ರನ್ನು ಅವರ ಕರ್ತವ್ಯಗಳಿಂದ ಬಿಡುಗಡೆಗೊಳಿಸಬೇಕು. ಎರಡನೇ ಬೇಡಿಕೆ ವಿದ್ಯಾರ್ಥಿಗಳ ಮೇಲೆ ಕೈಯೆತ್ತಿದ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿಸಬೇಕು ಮತ್ತು ಪ್ರಧಾನಿ ಮೋದಿ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ನಾವು ಈ ಬೇಡಿಕೆಗಳನ್ನು ಹಾಗೂ ಬೀದಿಗಿಳಿದಿರುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದು ಘೋಷಿಸಿದರು.
ಇದನ್ನೂ ಓದಿ: CJP ಪ್ರತಿಭಟನೆ ಬೆನ್ನಲ್ಲಿಯೇ ತನ್ನ ಇನ್ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ Naimisha Pradhan


