ಇಂದು 18ನೇ ಕಾರ್ಗಿಲ್ ವಿಜಯೋತ್ಸವ; ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ದಿನ
ಇವತ್ತು 18ನೇ ಕಾರ್ಗಿಲ್ ವಿಜಯೋತ್ಸವ. ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಸ್ತಾನಿಗಳನ್ನು ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ . ಎದೆತಟ್ಟಿ ನಮ್ಮ ಸಾಮರ್ಥ್ಯ ಇಡೀ ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ಯೋಧರ ತ್ಯಾಗವನ್ನು ಸ್ಮರಿಸುವ ದಿನವೇ ಕಾರ್ಗಿಲ್ 'ವಿಜಯ್ ದಿವಸ್'.
ಜುಲೈ 26: ಇಂದು 18ನೇ ಕಾರ್ಗಿಲ್ ವಿಜಯೋತ್ಸವ ದಿನ. ಮೈ ಕೊರೆವ ಚಳಿಯಲ್ಲಿ, ರಕ್ತ ಹೆಪ್ಪುಗಟ್ಟಿಸುವ ಹಿಮದ ರಾಶಿಯ ನಡುವೆ ವೀರಾವೇಶದಿಂದ ಹೋರಾಡಿ, ಮಾತೃಭೂಮಿಗಾಗಿ ಮಣ್ಣಲ್ಲಿ ಮಣ್ಣಾದ ಸಾವಿರಾರು ಸೈನಿಕರು ನಮಗೆ ನೀಡಿ ಹೋದ ವಿಜಯದ ದಿನ. ದೇಶವಿದನ್ನು ಅಭಿಮಾನ ಮತ್ತು ನೋವಿನೊಂದಿಗೆ ಆಚರಿಸುತ್ತಿದೆ. ನಮಗಾಗಿ ಮಡಿದವರ ನೆನಪಿನಲ್ಲಿ ತುಂಬಿ ಬರುವ ಕಣ್ಣೀರಿನ ನಡುವೆ ಅವರ ತ್ಯಾಗ, ಧೈರ್ಯ, ಸಾಹಸ, ಬಲಿದಾನದ ಪ್ರತೀಕವೇ ಕಾರ್ಗಿಲ್ ವಿಜಯೋತ್ಸವ.
ಕಾರ್ಗಿಲ್ ಯುದ್ಧ ಎಂದ ಕೂಡಲೇ ನಮ್ಮ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆ ಸಂಚಾರವಾಗುತ್ತದೆ. 1999ರ ಮೇ 8 ರಿಂದ ಜುಲೈ 26 ರವರೆಗೆ ನಡೆದ 74 ದಿನಗಳ ಘೋರ ಯುದ್ಧ ವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ 20 ಸಾವಿರ ಭಾರತೀಯ ಯೋಧರು ಭಾಗವಹಿಸಿ, 527 ಯೋಧರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡರು. ಯುದ್ಧದ ವೇಳೆಯಲ್ಲಿ ನಮ್ಮ ಭಾರತೀಯ ಯೋಧರು ಸುಮಾರು 18 ಸಾವಿರ ಅಡಿಗಳಷ್ಟು ಎತ್ತರದ ಕಡಿದಾದ ಪರ್ವತ ಹತ್ತಿ ಯುದ್ಧ ಮಾಡಿ ವಿಜಯ ಸಾಧಿಸಿದರು.
ಒಟ್ಟಿನಲ್ಲಿ ಭಾರತಾಂಬೆಯ ರಕ್ಷಣೆಗೆ ಪ್ರಾಣತ್ಯಾಗ ಮಾಡಿದ ವೀರಯೋಧರಿಗೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ಈ ದಿನ ಇಡೀ ದೇಶವವೇ ಸೆಲ್ಯೂಟ್ ಹೊಡೆಯುತ್ತೆ. ವೀರ ಯೋಧರಿಗೆ ನಮ್ಮದೊಂದು ಸಲಾಂ.
- ಜೆ.ಎಸ್. ಪೂಜಾರ್, ನ್ಯೂಸ್ ಡೆಸ್ಕ್, ಸುವರ್ಣನ್ಯೂಸ್