ತಾಜ್ ಮಹಲ್ ಜಿಲ್ಲೆಗೆ ಕನ್ನಡಿಗ ಜಿಲ್ಲಾಧಿಕಾರಿ
- ಮಂಡ್ಯದ ನಾಗತಿಹಳ್ಳಿಯವರಾದ ಎನ್.ಜಿ.ರವಿಕುಮಾರ್
- 2004ರಲ್ಲಿ ಉತ್ತರಪ್ರದೇಶ IAS ಕೇಡರ್ ಅಧಿಕಾರಿಯಾಗಿ ನಿಯೋಜನೆ
ಆಗ್ರ[ಜೂ.26]: ಉತ್ತರ ಪ್ರದೇಶದ ಆಗ್ರಾ ಜಿಲ್ಲೆಗೆ ಕನ್ನಡಿಗ ಎನ್.ಜಿ. ರವಿಕುಮಾರ್ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕರ್ನಾಟಕ ಮೂಲದ ರವಿಕುಮಾರ್ ಅವರು 2004ರಲ್ಲಿ ಉತ್ತರ ಪ್ರದೇಶದ ಕೇಡರ್ ಐಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದರು. ಹಾಲಿಯಿದ್ದ ಗೌರವ್ ದಯಾಳ್ ಅವರನ್ನು ಒಳಗೊಂಡಂತೆ 7 ಮಂದಿ ಐಎಎಸ್ ಅಧಿಕಾರಿಗಳನ್ನು 2 ದಿನಗಳ ಹಿಂದಷ್ಟೆ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು.
ಮಂಡ್ಯದ ನಾಗತಿಹಳ್ಳಿಯವರಾದ ಎನ್.ಜಿ.ರವಿಕುಮಾರ್ 2004ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ನಂತರ ಉತ್ತರ ಪ್ರದೇಶದ ಕೇಡರ್ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ರವಿ ಅವರು ಕೇಂದ್ರ ಸಚಿವರಾದ ಉಮಾ ಭಾರತಿ ಮತ್ತು ಜಿ.ಎಂ.ಸಿದ್ದೇಶ್ವರ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ಮಥುರಾ ಮತ್ತು ಉನ್ನಾವೋ ಜಿಲ್ಲಾಧಿಕಾರಿಯಾಗಿ ಉತ್ತಮ ಹೆಸರು ಮಾಡಿದ್ದರು.
ಆಗ್ರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ರವಿ ಕುಮಾರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರ ಸ್ವಕ್ಷೇತ್ರ ಗೋರಖ್'ಪುರದಲ್ಲೂ 2 ವರ್ಷ ಸೇವೆ ಸಲ್ಲಿಸಿದ್ದಾರೆ. ರವಿಕುಮಾರ್ ಅವರ ತಂದೆ ಗಂಗಾಧರ್ ಗೌಡ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಡಿಡಿಪಿಐ ಆಗಿ ನಿವೃತ್ತಿಯಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಈ ಸುದ್ದಿಯನ್ನು ಓದಿ: ಕೋರ್ಟ್ ಹಾಲ್ ನಲ್ಲಿ ಪತ್ರಕರ್ತರಿಗೆ ಮೊಬೈಲ್ ಬಳಕೆಗೆ ಅವಕಾಶ