ವಿನೋದ್ ರಾಜ್ ಏಮಾರಿಸಿ ಕಾರಿನಲ್ಲಿದ್ದ 1 ಲಕ್ಷ ಲೂಟಿ
ಕನ್ನಡ ನಟ ವಿನೋದ್ ರಾಜ್ ಅವರ ಗಮನವನ್ನು ಬೇರೆಡೆ ಸೆಳೆದು ಅವರ ಬಳಿ ಇದ್ದ 1 ಲಕ್ಷ ಹಣವನ್ನು ಕದ್ದೊಯ್ಯಲಾಗಿದೆ.
ನೆಲಮಂಗಲ : ನಟ ವಿನೋದ್ ರಾಜ್ ಗಮನ ಬೇರೆಡೆ ಸೆಳೆದು, ಅವರ ಕಾರಿನಲ್ಲಿದ್ದ .1 ಲಕ್ಷ ನಗದನ್ನು ಲೂಟಿ ಮಾಡಿರುವ ಪ್ರಕರಣ ನೆಲಮಂಗಲದಲ್ಲಿ ಶುಕ್ರವಾರ ನಡೆದಿದೆ.
ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದ ಕೆಲಸಗಾರರಿಗೆ ಸಂಬಳ ನೀಡುವ ಸಲುವಾಗಿ, ಪಟ್ಟಣದ ಬಿ.ಎಚ್. ರಸ್ತೆಯಲ್ಲಿರುವ ಇಂಡಸ್ಇಂಡ್ ಬ್ಯಾಂಕ್ನಿಂದ .1 ಲಕ್ಷ ಡ್ರಾ ಮಾಡಿಕೊಂಡು ವಿನೋದ್ ರಾಜ್ ಹೊರಟಿದ್ದರು. ಈ ವೇಳೆ ಕಾರಿನ ಬಳಿ ಬಂದ ಅಪರಿಚಿತನೋರ್ವ ‘ಸಾರ್, ನಿಮ್ಮ ಕಾರಿನ ಟೈಯರ್ ಪಂಕ್ಚರ್ ಆಗಿದೆ’ ಎಂದಿದ್ದಾನೆ.
ತಕ್ಷಣ ವಿನೋದ್ ರಾಜ್ ಹಣವಿದ್ದ ಬ್ಯಾಗನ್ನು ಕಾರಿನಲ್ಲಿರಿಸಿ, ಟೈಯರ್ ಬದಲಿಸಲು ಕೆಳಗಿಳಿದಿದ್ದಾರೆ. ಈ ವೇಳೆ ಟೈಯರ್ ಪರಿಶೀಲನೆ ಮಾಡುವಷ್ಟರಲ್ಲಿ ಕಳ್ಳ, ಹಣವಿದ್ದ ಬ್ಯಾಗನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ನೆಲಮಂಗಲ ಠಾಣೆ ಪೊಲೀಸರಿಗೆ ವಿನೋದ್ ರಾಜ್ ದೂರು ನೀಡಿದ್ದಾರೆ.