ಅಪರಿಚಿತ ವ್ಯಕ್ತಿಗಳಿಂದ ಪತ್ರಕರ್ತನ ಮೇಲೆ ಗುಂಡಿನ ದಾಳಿ: ಸ್ಥಳದಲ್ಲೇ ಸಾವು
ಬೈಕ್'ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಪತ್ರಕರ್ತರೊಬ್ಬರನ್ನು ದಾರುಣವಾಗಿ ಶೂಟ್ ಮಾಡಿರುವ ಘಟನೆ ಕಾನ್ಪುರದ ಬಿಲ್'ಹೌರ್'ನಲ್ಲಿ ನಡೆದಿದೆ.
ನವದೆಹಲಿ (ನ.30): ಬೈಕ್'ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಪತ್ರಕರ್ತರೊಬ್ಬರನ್ನು ದಾರುಣವಾಗಿ ಶೂಟ್ ಮಾಡಿರುವ ಘಟನೆ ಕಾನ್ಪುರದ ಬಿಲ್'ಹೌರ್'ನಲ್ಲಿ ನಡೆದಿದೆ.
ಹಿಂದೂಸ್ಥಾನ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ನವೀನ್ ಗುಪ್ತಾ ಹತ್ಯೆಯಾದವರು. ಮೂತ್ರ ವಿಸರ್ಜನೆಗೆ ಹೊರ ಬಂದ ಸಂದರ್ಭದಲ್ಲಿ ಬೈಕ್'ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ನವೀನ್ ಮೇಲೆ ಗುಂಡು ಹಾರಿಸಿದ್ದಾರೆ. ಅವರ ಮುಖ ಹಾಗೂ ಹೊಟ್ಟೆಯ ಭಾಗಕ್ಕೆ 5 ಗುಂಡುಗಳು ಹೊಕ್ಕಿದ್ದು, ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ನವೀನ್ ನೆರವಿಗೆ ಕೂಡಲೇ ಅವರ ಸಹೋದರ ಹಾಗೂ ಸ್ಥಳೀಯರು ಧಾವಿಸಿದರು. ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ 4 ವರ್ಷದ ಮಗನನ್ನು ಅಗಲಿದ್ದಾರೆ.