ಮಳೆಗಾಲದಲ್ಲಿ ಹೆಚ್ಚಾಗುವ ತೇವಾಂಶದಿಂದಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ತರಕಾರಿಗಳ ಮೇಲೆ ವೇಗವಾಗಿ ಬೆಳೆಯುತ್ತವೆ. ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಹೊಟ್ಟೆಯ ಸೋಂಕಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆ ತರಕಾರಿ ಯಾವವು ಎನ್ನುವುದನ್ನು ನೋಡೋಣ ಬನ್ನಿ.
ಮಳೆಗಾಲ ಎಂದರೆ ಪ್ರಕೃತಿಗೆ ತಂಪು, ಮನಸ್ಸಿಗೆ ಮುದ. ಆದರೆ, ಇದೇ ಮಳೆಯು ನಮಗೆ ಅರಿವಿಲ್ಲದಂತೆ ಅನೇಕ ರೋಗ-ರುಜಿನಗಳನ್ನು ಹೊತ್ತು ತರುತ್ತದೆ. ವಿಶೇಷವಾಗಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗಾಳಿ ಮತ್ತು ಮಣ್ಣಿನಲ್ಲಿ ತೇವಾಂಶದ ಮಟ್ಟ ಗಣನೀಯವಾಗಿ ಹೆಚ್ಚಾಗುತ್ತದೆ. ಈ ವಾತಾವರಣವು ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮತ್ತು ಬೂಷ್ಟುಗಳಂತಹ ಅಸಂಖ್ಯಾತ ಅಪಾಯಕಾರಿ ಸೂಕ್ಷ್ಮಜೀವಿಗಳು ವೇಗವಾಗಿ ಅಭಿವೃದ್ಧಿ ಹೊಂದಲು ಅತ್ಯಂತ ಅನುಕೂಲಕರ ಸ್ಥಳವಾಗಿದೆ.
ಯಾವವು ಆ ತರಕಾರಿಗಳು!
ಎಲ್ಲೆಂದರಲ್ಲಿ ಕಲುಷಿತ ನೀರು ಸಂಗ್ರಹವಾಗುವುದರಿಂದ ಮಣ್ಣಿನಲ್ಲಿರುವ ಹಾನಿಕಾರಕ ಕ್ರಿಮಿಗಳು ಕೊಚ್ಚಿಬಂದು ತರಕಾರಿಗಳ ಮೇಲ್ಮೈ ಹಾಗೂ ಸಣ್ಣ ಬಿರುಕುಗಳನ್ನು ಸೇರಿಕೊಳ್ಳುತ್ತವೆ. ಮಳೆಗಾಲದಲ್ಲಿ ಸೂರ್ಯನ ಬೆಳಕಿನ ಅಭಾವವಿರುವುದರಿಂದ ತರಕಾರಿಗಳ ಮೇಲಿರುವ ತೇವಾಂಶ ಬೇಗನೆ ಒಣಗುವುದಿಲ್ಲ. ಇದು ಸೂಕ್ಷ್ಮಜೀವಿಗಳಿಗೆ ಉತ್ತಮ ಪೋಷಣೆ ನೀಡಿ, ಅವುಗಳ ಸಂಖ್ಯೆಯನ್ನು ಕೆಲವೇ ಗಂಟೆಗಳಲ್ಲಿ ನೂರಾರು ಪಟ್ಟು ಹೆಚ್ಚಿಸುತ್ತದೆ. ಹೀಗಾಗಿ, ಸಂತೆಯಲ್ಲಿ ಎಷ್ಟು ತಾಜಾ ಆಗಿ ಕಂಡರೂ ಮಳೆಗಾಲದಲ್ಲಿ ಈ ಕೆಳಗಿನ ತರಕಾರಿಗಳನ್ನು ಖರೀದಿಸುವುದು ನಿಮ್ಮ ಆರೋಗ್ಯಕ್ಕೆ ಸೈಲೆಂಟ್ ಪಾಯ್ಸನ್ ಆಗಬಹುದು!
ಹೂಕೋಸು ಸಣ್ಣ ಹುಳುಗಳ ಅಡಗುದಾಣ !
ಹೂಕೋಸು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದರೂ, ಮಳೆಗಾಲದಲ್ಲಿ ಇದು ಕ್ರಿಮಿಕೀಟಗಳ ನೆಚ್ಚಿನ ತಾಣ. ಹೂಕೋಸಿನ ಎಲೆ ಹಾಗೂ ಹೂವುಗಳ ಮಡಿಕೆಗಳ ನಡುವೆ ಸಣ್ಣ ಪರಾವಲಂಬಿ ಜೀವಿಗಳು ಹಾಗೂ ಬ್ಯಾಕ್ಟೀರಿಯಾಗಳು ಬದುಕಿರುತ್ತವೆ. ಇವು ಬರಿಗಣ್ಣಿಗೆ ಸುಲಭವಾಗಿ ಕಾಣಿಸುವುದಿಲ್ಲ. ಇಂತಹ ಕಲುಷಿತ ಹೂಕೋಸನ್ನು ಸೇವಿಸುವುದರಿಂದ ಗಂಭೀರ ಹೊಟ್ಟೆಯ ಸೋಂಕು ಎದುರಾಗಬಹುದು. ಒಂದು ವೇಳೆ ತಂದರೂ, ಬಿಸಿ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿದ ನಂತರವೇ ಬಳಸಿ.
ಎಲೆ ತರಕಾರಿಗಳು ಹಾಗೂ ಸೊಪ್ಪುಗಳು!
ಪಾಲಕ್, ಮೆಂತ್ಯ, ಕೊತ್ತಂಬರಿ ಹಾಗೂ ಲೆಟಿಸ್ನಂತಹ ಸೊಪ್ಪುಗಳು ಮಳೆಗಾಲದಲ್ಲಿ ತೇವಾಂಶ ಮತ್ತು ಕೊಳಕನ್ನು ಸ್ಪಂಜಿನಂತೆ ಹೀರಲ್ಪಡುತ್ತವೆ. ಇವುಗಳ ಎಲೆಗಳ ಅಡಿಯಲ್ಲಿ ಬೂಷ್ಟು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಸುಲಭವಾಗಿ ವೃದ್ಧಿಯಾಗುತ್ತವೆ. ಇವುಗಳನ್ನು ಸರಿಯಾಗಿ ತೊಳೆಯದೆ ತಿಂದರೆ ತೀವ್ರವಾದ ಹೊಟ್ಟೆನೋವು ಮತ್ತು ವಾಂತಿ-ಭೇದಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಮಳೆಗಾಲದಲ್ಲಿ ಹಸಿರು ಸೊಪ್ಪುಗಳನ್ನು ತಪ್ಪಿಸುವುದು ಒಳಿತು, ಬಳಸುವುದಾದರೆ ಬಿಸಿ ನೀರಿನಿಂದ ಕಡ್ಡಾಯವಾಗಿ ತೊಳೆಯಬೇಕು.
ಬದನೆಕಾಯಿ: ಕಣ್ಣಿಗೆ ಕಾಣದ ಅಪಾಯ!
ಬದನೆಕಾಯಿಯಲ್ಲಿ ಹುಳುಗಳು ಇರುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಕೀಟಗಳು ಬದನೆಕಾಯಿಯೊಳಗೆ ಸೂಕ್ಷ್ಮವಾದ ತಟ್ಟೆಗಳು ಅಥವಾ ಮೊಟ್ಟೆಗಳ ಚೀಲಗಳನ್ನು ಬಿಡುತ್ತವೆ. ಹಲವರು ಹುಳು ಇರುವ ಭಾಗವನ್ನು ಕತ್ತರಿಸಿ ಹಾಕಿ ಉಳಿದಿದ್ದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದು ತೀವ್ರ ಅಪಾಯಕಾರಿ! ಸರಿಯಾಗಿ ಬೇಯದಿದ್ದರೆ ಈ ಸೂಕ್ಷ್ಮ ಜೀವಕೋಶಗಳು ಹೊಟ್ಟೆಯನ್ನು ಸೇರಿ ಇನ್ಫೆಕ್ಷನ್ ಉಂಟುಮಾಡುತ್ತವೆ. ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಒಳಗೆ ಹುಳುಗಳಿರುವ ಸಾಧ್ಯತೆ ಹೆಚ್ಚು.
ಅಣಬೆಗಳು!
ತಾಜಾ ಅಣಬೆಗಳು ನಿಸರ್ಗದತ್ತವಾಗಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಅಣಬೆಯು ಸ್ಪಂಜಿನಂತಿದ್ದು, ಮಳೆಗಾಲದ ಕಲುಷಿತ ಗಾಳಿ ಮತ್ತು ನೀರನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶಗಳು ಅಣಬೆಯಲ್ಲಿ ವೇಗವಾಗಿ ಹರಡುತ್ತವೆ. ಜೊತೆಗೆ ಮಳೆಗಾಲದಲ್ಲಿ ಅಪಾಯಕಾರಿ ಕಾಡು ಅಣಬೆಗಳು ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ಇವುಗಳ ಸೇವನೆಯಿಂದ 'ಫುಡ್ ಪಾಯ್ಸನಿಂಗ್' ಆಗುವ ಅಪಾಯವಿರುತ್ತದೆ.


