ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ಯೋಜನೆ ಸದ್ಯದಲ್ಲೆ ಆರಂಭವಾಗುವ ಯಾವ ಸೂಚನೆಯೂ ಸಿಗ್ತಿಲ್ಲ. ಆರಂಭದಲ್ಲಿ ಇಸ್ಕಾನ್ ಜೊತೆ ಮಾಡಿಕೊಂಡ ಒಪ್ಪಂದ ಮುರಿದು ಬಿದ್ದಿದೆ. ಹಾಗಾದ್ರೆ ಒಪ್ಪಂದ ಮುರಿದು ಬೀಳಲು ಕಾರಣವೇನು ಅಂತೀರಾ..? ಈ ಸ್ಟೋರಿ ಓದಿ.

ಬೆಂಗಳೂರು(ಮಾ. 31): ಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಇಂದಿರಾ ಕ್ಯಾಂಟೀನ್ ಘೋಷಣೆ ಮಾಡಿ ಶೀಘ್ರದಲ್ಲೆ ಕ್ಯಾಂಟೀನ್ ತೆರೆಯುವ ಭರವಸೆ ನೀಡಿತ್ತು. ಆದ್ರೆ ಇಸ್ಕಾನ್ ಜೊತೆ ಬಹುತೇಕ ಮುಗಿದಿದ್ದ ಟೆಂಡರ್ ಪ್ರಕ್ರಿಯೆ ಕೊನೆಯಲ್ಲಿ ಮುರಿದು ಬಿದ್ದಿದೆ. ಈಸ್ಕಾನ್ ಈರುಳ್ಳಿ ಬೆಳ್ಳುಳ್ಳಿ ಬಳಸಲ್ಲ ಎನ್ನುವ ಕಾರಣವಿದ್ದರೂ, ಬೇರೆ ಏನಾದರೂ ಕಾರಣವಿರಬಹದು ಅನ್ನೋ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Add Asianetnews Kannada as a Preferred SourcegooglePreferred

ಸಚಿವ ಯು.ಟಿ.ಖಾದರ್ ಅವರು ಹೋದಲ್ಲೆಲ್ಲ ಈರುಳ್ಳಿ, ಬೆಳ್ಳುಳ್ಳಿ ಕಾರಣ ಕೊಡ್ತಿದ್ದಾರೆ ನಿಜ. ಆದ್ರೆ ಇಸ್ಕಾನ್ ಹೇಳೋದೇ ಬೇರೆ. "ನಾವು ಕ್ಯಾಂಟೀನ್'ನಲ್ಲಿ ರಾತ್ರಿ ಊಟ ಮಾತ್ರ ನೀಡಲು ಸಿದ್ದರಿದ್ದೆವು. ಆದರೆ ಸಿಎಂ ಮೂರು ಹೊತ್ತು ಆಹಾರ ಸರಬರಾಜು ಮಾಡಲು ಕೋರಿದ್ದರು. ನಮಗೆ ಮೂರು ಹೊತ್ತು ಆಹಾರ ಕೊಡಲು ಆಗುವುದಿಲ್ಲ. ಸದ್ಯ ಅಕ್ಷಯ ಪಾತ್ರೆ ಯೋಜನೆಯಡಿ ಮಕ್ಕಳಿಗೆ ಮಧ್ಯಾಹ್ನ ಊಟ ಕೊಡುತ್ತಿದ್ದೇವೆ. ಹೀಗಾಗಿ ಬೆಳಗ್ಗೆ, ಮಧ್ಯಾಹ್ನ ಕ್ಯಾಂಟೀನ್'ಗೆ ಊಟ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ಹಾಗಾಗಿ ಸರಕಾರ ಬೇರೆಯವರಿಗೆ ಕ್ಯಾಂಟೀನ್ ಕೊಡುತ್ತೇವೆ ಎಂದಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ ಕೂಡ" ಎಂದು ಇಸ್ಕಾನ್ ಹೇಳಿದೆ.

ಇಸ್ಕಾನ್ ಸಂಸ್ಥೆಯು ಅಡುಗೆಗೆ ಈರುಳ್ಳಿ , ಬೆಳ್ಳುಳ್ಳಿ ಬಳಸಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಿರುವಾಗ ಸರ್ಕಾರಕ್ಕೆ ಈ ವಿಚಾರ ಗೊತ್ತಿರಲಿಲ್ವಾ?, ಈಗ ಈರುಳ್ಳಿ, ಬೆಳುಳ್ಳಿ ಬಳಸಲ್ಲ ಅಂತಾ ಸಚಿವರು ಇಸ್ಕಾನ್'ನ್ನು ದೂರೋದು ಯಾಕೆ? ಇದಕ್ಕೆಲ್ಲಾ ಸಚಿವರೇ ಉತ್ತರಿಸಬೇಕಿದೆ. 

- ರವಿ ಶಿವರಾಮ್, ಪೊಲಿಟಿಕಲ್ ಬ್ಯೂರೊ, ಸುವರ್ಣ ನ್ಯೂಸ್