ಕಾರ್ಗಿಲ್ ವಿಜಯ್ ದಿವಸ್ ಗೆ 20 ವರ್ಷದ |ಸಂಭ್ರಮ ಶಾಂತಿ ಒಪ್ಪಂದವಾಗಿದ್ದರೂ ಕಪಟತನ ತೋರಿ ಭಾರತದ ಮೇಲೆ ರಹಸ್ಯ ಆಕ್ರಮಣ ಮಾಡಿದ್ದ ಪಾಕ್ | ಪರ್ವತ ಶಿಖರ ಏರಿ ಆಕ್ರಮಣ ಮಾಡುತ್ತಿದ್ದ ಪಾಕಿಗಳಿಗೆ ತಕ್ಕ ಪಾಠ ಕಲಿಸಿದ ಭಾರತದ ಹೆಮ್ಮೆಯ ಯೋಧರು 

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ. ಪಾಕಿಸ್ತಾನದ ಸೈನಿಕರನ್ನು ನಮ್ಮ ಯೋಧರು ವೀರಾವೇಶದಿಂದ ಹಿಮ್ಮೆಟ್ಟಿಸಿ ವಿಜಯದ ಪತಾಕೆ ಹಾರಿಸಿದ ದಿನ. ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನಾಗಿ ಆಚರಿಸಲಾಗುತ್ತದೆ.

Add Asianetnews Kannada as a Preferred SourcegooglePreferred

ಇಂದು ಎಲ್ಲೆಲ್ಲಿ ಏನೇನು ಕಾರ‍್ಯಕ್ರಮ?

ದ್ರಾಸ್‌ನಲ್ಲಿ ರಾಷ್ಟ್ರಪತಿ ಜತೆ ಯೋಧರ ವಿಜಯೋತ್ಸವ

ಕಾರ್ಗಿಲ್‌ ಯುದ್ಧದ 20 ನೇ ವರ್ಷಾಚರಣೆಯನ್ನು ಭಾರತೀಯ ಸೇನೆ ಕಾರ್ಗಿಲ್‌ ಜಿಲ್ಲೆಯ ದ್ರಾಸ್‌ ಪಟ್ಟಣದಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕದಲ್ಲಿ ಶುಕ್ರವಾರ ಹಮ್ಮಿಕೊಂಡಿದೆ. ರಾಷ್ಟ್ರಪತಿ ರಾಮನಾತ್‌ ಕೋವಿಂದ್‌ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜಯೋತ್ಸವದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜು.14 ರಂದು ದೆಹಲಿಯಲ್ಲಿ ವಿಜಯಜ್ಯೋತಿ ಬೆಳಗಿಸಿದ್ದರು.

ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮಕ್ಕೆ 20 ವರ್ಷ

ಇದನ್ನು ದೆಹಲಿಯಿಂದ ದ್ರಾಸ್‌ಗೆ ತರಲಾಗಿದ್ದು, ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರು ಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ಕಾರ್ಗಿಲ್‌ ಯುದ್ಧ ಸ್ಮಾರಕದಲ್ಲಿರುವ ಅಮರ ಜ್ಯೋತಿಯಲ್ಲಿ ವಿಜಯ ಜ್ಯೋತಿ ಲೀನವಾಗಲಿದೆ. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭೂಸೇನೆ, ವಾಯು ಸೇನೆ ಹಾಗೂ ನೌಕಾಪಡೆಯ ಮುಖ್ಯಸ್ಥರು ಪಾಲ್ಗೊಳ್ಳಲಿದ್ದು, ಯೋಧರ ಜೊತೆ ವಿಜಯೋತ್ಸವ ಆಚರಿಸಲಿದ್ದಾರೆ. ಇದೇ ವೇಳೆ ಭಾರತೀಯ ವಾಯುಪಡೆಯಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲೂ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ತಿರಂಗಾ ಖೀರ್‌ ಔತಣ

ದ್ರಾಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಸೆಲೆ​ಬ್ರಿಟಿ ಬಾಣ​ಸಿಗ ಸಂಜೀವ್‌ ಕಪೂರ್‌ ‘ತ್ರಿ​ವರ್ಣ ಖೀರ್‌’ (ತಿರಂಗಾ ಖೀರ್‌) ಸಿದ್ಧ​ಪ​ಡಿ​ಸು​ತ್ತಿ​ದ್ದಾರೆ. ತ್ಯಾಗ-ಬಲಿ​ದಾ​ನ​ಗೈ​ದ​ವ​ರ ಕುಟುಂಬ​ಗ​ಳಿಗೆ, ಸೇನಾ ಯೋಧ​ರಿಗೆ ಹಾಗೂ ಹಿರಿಯ ಸೇನಾ​ನಿ​ಗ​ಳಿಗೆ ಇದನ್ನು ಉಣ​ಬ​ಡಿ​ಸ​ಲಿ​ದ್ದಾ​ರೆ.

‘ಮಿಷನ್‌ ಟೇಸ್ಟ್‌ ಆಫ್‌ ಕಾರ್ಗಿ​ಲ್‌’ ಹೆಸ​ರಿ​ನಲ್ಲಿ ಶುಕ್ರ​ವಾರ ‘ಕಾರ್ಗಿಲ್‌ ವಿಜಯ್‌ ದಿವ​ಸ್‌’ ಅಂಗ​ವಾಗಿ 500 ಜನ​ರಿಗೆ ವಿಶೇಷ ಔತಣ ಕೂಟದ ಮೂಲಕ ಹುತಾತ್ಮರ ಕುಟುಂಬ​ಗ​ಳಿಗೆ ಸಂತಸ ಮತ್ತು ಖುಷಿ ನೀಡಲು ಮುಂದಾ​ಗಿದ್ದೇವೆ. ಪದ್ಮಶ್ರೀ ಪುರ​ಸ್ಕೃ​ತರ ಜತೆ ಸೇರಿ, ಮಕ್ಮಲಿ ಪನೀರ್‌ ಅನಾ​ರ್ಧಾನ್‌, ಹಿಂಗ್‌ ಧಾನಿಯಾ ಕೆ ಆಲೂ, ಲಲ್ಲಾ ಮೂಸಾ ದಾಲ್‌, ಖಾಡೆ ಮಸಾಲೆ ಕಾ ಕುಕ್ಕಡ, ಪ್ರೋಟೀನ್‌ ಫಲಾವ್‌, ಮಸಾಲಾ ಪುರಿ ಮತ್ತು ಕಾರ್ಗಿಲ ವಿಜಯ್‌ ದಿವಸ್‌ನ ವಿಶೇ​ಷ ಖಾದ್ಯ ‘ತಿರಂಗಾ ಖೀರ್‌’ ಎಲ್ಲರ ಹೊಟ್ಟೆ​ಯನ್ನು ತಂಪಾ​ಗಿ​ಸ​ಲಿ​ವೆ ಎಂದು ಸಂಜೀವ್‌ ಕಪೂರ್‌ ಸಂತಸ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

ದೂರದರ್ಶನದಲ್ಲಿ ದೇಶಾದ್ಯಂತ ಪ್ರಸಾರವಾದ ಮೊದಲ ಯುದ್ಧ

ಭಾರತ-ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧ ಆಧುನಿಕ ಭಾರತದ ಇತಿಹಾಸದಲ್ಲಿ ಮೈಲುಗಲ್ಲು. ಭಾರತದ ಇತಿಹಾಸ ದಲ್ಲಿ ಎಮೆರ್ಜೆಂಟ್ ಬ್ರಾಡ್‌ಕಾಸ್ಟ್ ಜರ್ನಲಿಸಂ ಮೂಲಕ ದೇಶಾದ್ಯಂತ ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಯುದ್ಧವಿದು. ಈ ಯುದ್ಧ ಪರಮಾಣು ಬಾಂಬ್‌ಗಳನ್ನು ಹೊಂದಿದ್ದ ಎರಡೂ ದೇಶಗಳಿಗೂ ಪ್ರತಿಷ್ಠೆಯ ಕಣವಾಗಿತ್ತು